
Sidlaghatta : ಶಿಡ್ಲಘಟ್ಟ ನಗರದ ಚಿಂತಾಮಣಿ ರಸ್ತೆಯ ಸೇಕ್ರೆಡ್ ಹಾರ್ಟ್ ಚರ್ಚ್, ದಿಬ್ಬೂರಹಳ್ಳಿ ರಸ್ತೆಯ ಎಬೆನೆಜರ್ ಮಾರ್ತೋಮ ಚರ್ಚ್, ನೆಲ್ಲೀಮರದಹಳ್ಳಿಯ ಇಮ್ಮಾನುವೇಲ್ ಚರ್ಚ್ ಹಾಗೂ ತಾಲ್ಲೂಕಿನ ವಿವಿದೆಡೆಗಳಲ್ಲಿರುವ ಚರ್ಚ್ ಗಳನ್ನು ಶನಿವಾರ ಕ್ರಿಸ್ ಮಸ್ ಪ್ರಯುಕ್ತ ಬಣ್ಣಬಣ್ಣದ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಮೇಣದ ಬತ್ತಿಗಳನ್ನು ಬೆಳಗುವ ಮೂಲಕ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಜಾತಿ ಭೇದವಿಲ್ಲದೆ ಹಲವಾರು ಮಂದಿ ವಿವಿಧ ಚರ್ಚ್ ಗಳಿಗೆ ಭೇಟಿ ನೀಡಿ ಮೇಣದ ಬತ್ತಿಗಳನ್ನು ಬೆಳಗಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಪ್ರತಿ ಚರ್ಚ್ನ ಅಂಗಳದಲ್ಲಿ, ಕ್ರಿಶ್ಚಿಯನ್ನರ ಮನೆ ಏಸು ಜನಿಸಿದ ಗೋದಲಿಯ ಪ್ರತಿಕೃತಿಯನ್ನು ಮಾಡಲಾಗಿತ್ತು. ಕ್ರಿಬ್ ಅಥವಾ ಗೋದಲಿಯಲ್ಲಿ ಬೆತ್ಲೆಹೆಮ್ನ ಬೆಟ್ಟ ಗುಡ್ಡ, ಕಣಿವೆಗಳು, ಜಾರುವ ಝರಿ, ಇಳಿದು ಬರುವ ತೊರೆ, ಗದ್ದೆಗಳ ಹಸಿರಿನ ನಡುವೆ ದೈವಿಕ, ಮಾನವಿಕ ಪ್ರತಿಮೆಗಳು, ಪ್ರಾಣಿ, ಪಕ್ಷಿಗಳ ಮೂರ್ತಿಗಳು ಮರು ಸಷ್ಟಿಪಡೆದಿತ್ತು. ಸಿಂಗಾರಗೊಂಡ ಗೋದಲಿಯಲ್ಲಿ ಬಾಲ ಏಸುವಿನ ಮುಖವನ್ನು ಬಂದವರೆಲ್ಲ ಭಕ್ತಿಭಾವದಿಂದ ಕಾಣುತ್ತಿದ್ದರು.
“ವರ್ಷಕ್ಕೊಮ್ಮೆ ಬರುವ ಏಸುಕ್ರಿಸ್ತನ ಜಯಂತಿಯನ್ನು ಸಡಗರದಿಂದ, ಭಕ್ತಿ ಭಾವದಿಂದ ಕ್ರಿಶ್ಚಿಯನ್ನರು ಆಚರಿಸುತ್ತಾರೆ. ಕ್ರೈಸ್ತರಿಗೆ ಪವಿತ್ರ ಹಬ್ಬವಾಗಿರುವ ಕ್ರಿಸ್ ಮಸ್ ಅಥವಾ ಕ್ರಿಸ್ತ ಜಯಂತಿಯನ್ನು ಪ್ರತಿವರ್ಷ ವಿಶ್ವದಾದ್ಯಂತ ಸಂಭ್ರಮ ಸಡಗರಗಳಿಂದ ಆಚರಣೆ ಮಾಡಲಾಗುತ್ತದೆ. ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ತಾಲ್ಲೂಕಿನ ಎಲ್ಲಾ ಚರ್ಚುಗಳಲ್ಲಿ ವಿವಿಧ ರೀತಿಗಳಲ್ಲಿ ಆಚರಣೆ ಮಾಡುತ್ತಾ ಬಂದಿದ್ದು, ಏಸುವಿನ ಸಂದೇಶವನ್ನು ಜನರಿಗೆ ತಿಳಿಸಲಾಗುತ್ತಿದೆ.
ಕ್ರಿಸ್ ಮಸ್ ಸಮಯದಲ್ಲಿ ಕ್ರೈಸ್ತ ಕುಟುಂಬಗಳ ಮೇಲೆ ನಕ್ಷತ್ರಗಳನ್ನು ಕಟ್ಟುವುದು ವಾಡಿಕೆ. ಕ್ರೈಸ್ತರು ನಮಗಾಗಿ ಜನಿಸಿದ ರಕ್ಷಕನು ಏಸು ಎಂಬ ನಂಬಿಕೆಯಿಂದ ಕ್ರಿಸ್ ಮಸ್ ಹಬ್ಬವನ್ನು ಶ್ರದ್ಧಾಭಕ್ತಿಗಳಿಂದ ತಮ್ಮ ಮನೆಗಳನ್ನು ವಿವಿಧ ಬಣ್ಣದ ಕಾಗದಗಳಿಂದ ಅಲಂಕಾರ ಮಾಡಿ, ಸ್ನೇಹಿತರು, ಬಂಧುಗಳು, ಸೇರಿದಂತೆ ಎಲ್ಲರೊಂದಿಗೂ ಶುಭಾಶಯಗಳನ್ನು ಹಂಚಿಕೊಂಡು ಎಲ್ಲರ ಒಳಿತಾಗಿ ಪ್ರಾರ್ಥನೆ ಮಾಡುವುದು ರೂಢಿಯಲ್ಲಿದೆ. ಪ್ರತಿಯೊಂದು ಚರ್ಚ್ ನಲ್ಲಿಯೂ ಏಸುವಿನ ಜನ್ಮವೃತ್ತಾಂತವನ್ನು ಪ್ರತಿನಿಧಿಸುವಂತೆ ಪ್ರತಿಕೃತಿಗಳ ಮೂಲಕ ಅಲಂಕಾರವನ್ನು ಮಾಡಿರುತ್ತಾರೆ” ಎಂದು ಇಮ್ಮಾನುವೇಲ್ ಕ್ರಿಶ್ಚಿಯನ್ ಚರ್ಚ್ ನ ಫಾದರ್ ಜೇಮ್ಸ್ ವೆಂಕಟೇಶ್ ತಿಳಿಸಿದರು.





Join Telegram







