Bagepalli : ಬಾಗೇಪಲ್ಲಿ ಪಟ್ಟಣದ ಬೈಲಾಂಜನೇಯ ದೇವಸ್ಥಾನದಲ್ಲಿ ಮೊಹರಂನ (Muharram) ಬಾಬಯ್ಯ ಹಬ್ಬವನ್ನು (Babayya festival) ಹಿಂದೂ-ಮುಸ್ಲಿಂ ಬಾಂಧವರು ಒಗ್ಗೂಡಿ ಆಚರಿಸುವ ಮೂಲಕ ಹಿಂದೂ-ಮುಸ್ಲಿಂ (Hindu-Muslim) ಭಾವೈಕ್ಯತೆಯನ್ನು ಮೆರೆದರು.
ಬಾಗೇಪಲ್ಲಿ ಪಟ್ಟಣದ ಪುರಾತನ ಬೈಲಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಹಿಂದೂಗಳು ಪೂಜೆ ಸಲ್ಲಿಸಿದರೆ, ದೇವಸ್ಥಾನದ ಆವರಣದಲ್ಲಿರುವ ಬಾಬಯ್ಯನ ಪೀರ್ ಚಾವಡಿಗೆ ಮುಸ್ಲಿಮರು ಪೂಜೆ ಸಲ್ಲಿಸಿದರು. ಪತೇಹ (ಪ್ರಾರ್ಥನೆ) ಬೈಲಾಂಜನೇಯ ಮತ್ತು ಪೀರುಗೆ ಏಕಕಾಲದಲ್ಲಿ ಸಲ್ಲುತ್ತದೆ. ಇವು ಹಿಂದೂ ಮತ್ತು ಮುಸಲ್ಮಾನರ ನಡುವಿನ ಸ್ನೇಹದ ಬಂಧಗಳು ಎಂದು ನಂಬಲಾಗಿದೆ. ಮೊಹರಂ ಹಬ್ಬದ ನಿಮಿತ್ತ ಗುಡಿಗೆ ಸುಣ್ಣ ಬಣ್ಣ ಬಳಿದು, ವಿದ್ಯುತ್ ದೀಪ, ಹೂವಿನ ಅಲಂಕಾರ ಮಾಡಲಾಗಿತ್ತು. ಪೀರರ ಗುಡಿಯಲ್ಲಿ ಪಂಜಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಪಟ್ಟಣದ ಮುಖ್ಯರಸ್ತೆಯಾದ ಗುಳ್ಳೂರು ರಸ್ತೆಯಲ್ಲಿ ಕೈ, ಪಂಜಗಳನ್ನು ಮೆರವಣಿಗೆ ಮಾಡಲಾಯಿತು.
ಹಿಂದೂಗಳು ಮತ್ತು ಮುಸ್ಲಿಮರು ಪಾನಕ, ಸಿಹಿ ಬೂಂದಿ, ಸಕ್ಕರೆ ಮತ್ತು ಕಡಲೆಗಳನ್ನು ತಂಬಿಗೆಯಲ್ಲಿ ಪಂಜ ಮತ್ತು ಕೈಗಳಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಗುಡಿಯ ಮುಂದೆ ಅಗ್ನಿಕುಂಡವನ್ನು ಮಾಡಲಾಗಿತ್ತು. ತಮಟೆ ಸದ್ದಿಗೆ ಹಿರಿಯರು, ಕಿರಿಯರು ಶಿಳ್ಳೆ ಹೊಡೆದು ಅಗ್ನಿಕುಂಡದ ಸುತ್ತ ಹೆಜ್ಜೆ ಹಾಕಿ ಸಂಭ್ರಮಿಸಿದರು.