Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ವರದಹಳ್ಳಿಯಲ್ಲಿ ಹಕ್ಕಿಜ್ವರ ದೃಢಪಟ್ಟ ನಂತರ, ಪಶುಸಂಗೋಪನಾ ಇಲಾಖೆ ಪ್ರತಿ ತಾಲ್ಲೂಕಿನಲ್ಲಿ ಕುಕ್ಕುಟೋದ್ಯಮದಲ್ಲಿ ತೊಡಗಿರುವ ರೈತರು, ಕೋಳಿ ಮಾಂಸ ಮಾರಾಟಗಾರರಿಗೆ ಹಕ್ಕಿ ಜ್ವರದ ಬಗ್ಗೆ ಅರಿವು ಮೂಡಿಸಲು ಶಿಬಿರ ಆಯೋಜಿಸುತ್ತಿದೆ. ಶುಕ್ರವಾರ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಹಕ್ಕಿ ಜ್ವರದ ಬಗ್ಗೆ ಅರಿವು ಶಿಬಿರ (Bird Flu Awareness Workshop) ನಡೆಯಿತು.
ಭಾರತೀಯ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ವಿಜ್ಞಾನಿ ಪ್ರೊ. ಶಂಕರ್ ಮಾತನಾಡಿ, “ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈವರೆಗೆ ಹಕ್ಕಿಜ್ವರದಿಂದ ಮನುಷ್ಯರಿಗೆ ಯಾವುದೇ ತೊಂದರೆ ಉಂಟಾಗಿಲ್ಲ. ಜನರು ಭಯಪಡುವ ಅಗತ್ಯವಿಲ್ಲ. ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆ ಬಗ್ಗೆ ಅನಗತ್ಯ ಆತಂಕ ಪಡಬಾರದು” ಎಂದು ಸಲಹೆ ನೀಡಿದರು.
ತೀವ್ರ ಚಳಿ ಮತ್ತು ಬಿಸಿಲಿನ ಪರಿಣಾಮದಿಂದಲೂ ಕೋಳಿಗಳು ಮೃತಪಡಬಹುದು. ಕುಕ್ಕುಟೋದ್ಯಮದಲ್ಲಿ ತೊಡಗಿರುವವರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅಗತ್ಯ. ಕೋಳಿ ಮಾಂಸವನ್ನು ಕನಿಷ್ಠ 70 ಡಿಗ್ರಿ ಉಷ್ಣಾಂಶದಲ್ಲಿ ಬೇಯಿಸಿದರೆ ಹಕ್ಕಿಜ್ವರದ ವೈರಾಣು ನಾಶವಾಗುತ್ತದೆ ಎಂದು ತಿಳಿಸಿದರು.
ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ರಂಗಪ್ಪ ಮಾತನಾಡಿ, “ಜಿಲ್ಲೆಯಲ್ಲಿ ಹಕ್ಕಿಜ್ವರ ಪತ್ತೆಯಾದ ತಕ್ಷಣವೇ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋಳಿ ಉತ್ಪನ್ನ, ಪರಿಕರ, ಜೀವಂತ ಕೋಳಿಗಳ ಸಾಗಾಣಿಕೆ ನಿರ್ಬಂಧಿಸಲಾಗಿದೆ” ಎಂದು ಹೇಳಿದರು.
ಚಿಕ್ಕಬಳ್ಳಾಪುರ ನಗರದ 21ನೇ ವಾರ್ಡ್ನಲ್ಲಿ ಎರಡು ಕೋಳಿಗಳ ಮರಣ ಪ್ರಕರಣ ವರದಿಯಾಗಿದೆ. ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಫಲಿತಾಂಶಕ್ಕಾಗಿ ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.
ಸಂಪನ್ಮೂಲ ವ್ಯಕ್ತಿ ವಿಜ್ಞಾನಿ ರಮೇಶ್ ಮಾಹಿತಿ ನೀಡಿದರು. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪನಿರ್ದೇಶಕ ಜ್ಞಾನೇಶ್ ಹಾಗೂ ಇತರರು ಈ ಶಿಬಿರದಲ್ಲಿ ಭಾಗವಹಿಸಿದ್ದರು.