Chelur : ಚೇಳೂರು ಪಟ್ಟಣದ ಹೊರವಲಯದ ಪುಲ್ಲಗಲ್ಲು ಕ್ರಾಸ್ ಬಳಿ ತಾಲ್ಲೂಕು ಕಚೇರಿ ಕಟ್ಟಡವನ್ನು ನಿರ್ಮಿಸಲು ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ, ಪಟ್ಟಣದಲ್ಲಿಯೇ ನಿರ್ಮಾಣ ಮಾಡುವಂತೆ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಕರೆ ನೀಡಿದ ಚೇಳೂರು ಬಂದ್ (Chelur bandh) ಭಾನುವಾರ ಬೆಳಗ್ಗೆ 6 ಗಂಟೆಗೆ ಪ್ರಾರಂಭವಾಗಿ ಸಂಜೆ 5ಕ್ಕೆ ಮುಕ್ತಾಯವಾಯಿತು.
ಬಂದ್ ಸಮಯದಲ್ಲಿ ಪಟ್ಟಣದ ಅಂಗಡಿಗಳು ಸ್ವಯಂ ಪ್ರೇರಿತವಾಗಿ ಮುಚ್ಚಲ್ಪಟ್ಟಿದ್ದವು. ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬಿಜೆಪಿ, ಜೆಡಿಎಸ್ ಮುಖಂಡರು, ರೈತ ಸಂಘಗಳು ಹಾಗೂ ಸ್ಥಳೀಯ ಸಂಘಟನೆಗಳ ನಾಯಕರು ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ, “ಪ್ರಜಾಸೌಧವನ್ನು ಚೇಳೂರಿನಲ್ಲೇ ನಿರ್ಮಿಸಿ” ಎಂದು ಘೋಷಣೆ ಕೂಗಿದರು. ಬಸ್ ಸಂಚಾರ ನಿಂತಿದ್ದರಿಂದ ಪ್ರಯಾಣಿಕರು ನಡೆದುಕೊಂಡು ಹೋಗುವ ಸ್ಥಿತಿ ಎದುರಾಯಿತು; ಆಂಧ್ರ ಬಸ್ಗಳ ಸಂಚಾರವೂ ಸಂಪೂರ್ಣ ಸ್ಥಗಿತವಾಯಿತು.
ನಾಯಕರು ಮಾತನಾಡಿ, ತಾಲ್ಲೂಕಿನ 12 ಗ್ರಾಮ ಪಂಚಾಯಿತಿಗಳ ಜನರು ಈಗಿನಂತೆ ದೂರದ ಪುಲ್ಲಗಲ್ಲು ಕ್ರಾಸ್ಗೆ ಹೋಗಿ, ಅಲ್ಲಿ ಇಳಿದು ಮತ್ತೆ ಪ್ರಯಾಣಿಸುವುದು ಸಮಯ ಮತ್ತು ಹಣದ ನಷ್ಟವೆಂದು ವಾದಿಸಿದರು. ಕೆಲವರ ಸ್ವಾರ್ಥಕ್ಕಾಗಿ ಆಂಧ್ರ ಗಡಿಯಲ್ಲಿ ಕಚೇರಿ ಕಟ್ಟುವ ಯೋಜನೆ ನಡೆಯುತ್ತಿದೆ ಎಂದು ಆರೋಪಿಸಿ, ಜುಲೈ 13ರಂದು ಮತ್ತಷ್ಟು ದೊಡ್ಡ ಪ್ರತಿಭಟನಾ ರ್ಯಾಲಿ ನಡೆಸುವುದಾಗಿ ಘೋಷಿಸಿದರು. ಕಚೇರಿ ಚೇಳೂರಿನಲ್ಲಿ ನಿರ್ಮಿಸದಿದ್ದರೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.
ತಾ.ಪಂ. ಮಾಜಿ ಸದಸ್ಯ ಸೀತಿರೆಡ್ಡಿಪಲ್ಲಿ ಎಸ್.ವೈ. ವೆಂಕಟರವಣಪ್ಪ, ವಿ.ಎಸ್.ಎಸ್.ಎನ್.ಅಧ್ಯಕ್ಷ ಜೆ.ಪಿ.ಚಂದ್ರಶೇಖರರೆಡ್ಡಿ. ಜೆ.ಡಿ.ಎಸ್ ತಾಲ್ಲೂಕು ಅಧ್ಯಕ್ಷ ಎಸ್.ಆರ್. ಲಕ್ಷ್ಮಿನಾರಾಯಣ, ಸಿ.ಎನ್.ರೆಡ್ಡಪ್ಪ. ತಾಲ್ಲೂಕು ರೈತ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ತಾ.ಪಂ. ಮಾಜಿ ಸದಸ್ಯ ಎಸ್.ವೈ.ವೆಂಕಟರಮಣಾರೆಡ್ಡಿ, ಕೆ.ಎನ್.ರಾಮಕೃಷ್ಣಾ ರೆಡ್ಡಿ, ಗ್ರಾ.ಪಂ. ಸದಸ್ಯರಾದ ಕೊಂಡಿಕೊಂಡ ಸುಬ್ಬಾರೆಡ್ಡಿ ಮತ್ತಿತರರು ಬಂದ್ನಲ್ಲಿ ಭಾಗವಹಿಸಿದ್ದರು.
