Chintamani : ಚಿಂತಾಮಣಿ ನಗರದ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ ಹಾಗೂ ರಾಷ್ಟ್ರೀಯ ಒಣಬೇಸಾಯ ಸಂಶೋದನಾ ಕೇಂದ್ರ ಹೈದರಾಬಾದ್ ಸಹಯೋಗದೊಂದಿಗೆ ಚಿಂತಾಮಣಿ ತಾಲ್ಲೂಕಿನ ಹನುಮೈಗಾರಹಳ್ಳಿಯಲ್ಲಿ ‘ಕಿಸಾನ್ ಮೇಳ-2023’ (Kissan Mela) ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪಶುಗಳಿಗೆ ಕಾಲು ಬಾಯಿ, ಚಪ್ಪೆ, ನೆರಡಿ ರೋಗಗಳಿಗೆ ಚಿಕಿತ್ಸೆ ನೀಡಲಾಯಿತು. ಸುರಕ್ಷಿತವಾಗಿ ಮತ್ತು ಆರೋಗ್ಯಕರ ಎಚ್.ಎಫ್ ಕರು ಸಾಕಿದ ರೈತರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಕೆ.ಸಂಧ್ಯಾ “ಅವೈಜ್ಞಾನಿಕ ರಾಸಾನಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಕಳೆದುಕೊಳ್ಳುತ್ತಿದೆ. ಇತ್ತೀಚೆಗೆ ಇಪ್ಕೋ ಸಂಸ್ಥೆ ನ್ಯಾನೋ ಯೂರಿಯಾವನ್ನು ಅವಿಷ್ಕಾರ ಮಾಡಿದ್ದು ಇದು ಸಾರಜನಕದ ಮೂಲವಾಗಿದ್ದು ನಾಲ್ಕು ಮಿಲಿ ನ್ಯಾನೋ ಯೂರಿಯಾವನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಬೆಳೆಯ ಎಲೆಗಳ ಮೇಲೆ, ಬೆಳವಣಿಗೆಯ ವಿವಿಧ ಹಂತಗಳಲ್ಲಿ ಎರಡು ಬಾರಿ ಸಿಂಪಡಿಸುವುದು ಅವಶ್ಯಕ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಎಂ.ಪಾಪಿರೆಡ್ಡಿ, ಕೃಷಿ ವಿಜ್ಞಾನ ಕೇಂದ್ರದ ಸಸ್ಯರೋಗ ವಿಜ್ಞಾನಿ ಸ್ವಾತಿ, ವಿ.ಕೆ.ಆನಂದ್, ತಾಲ್ಲೂಕು ಪಶು ಆರೋಗ್ಯಾಧಿಕಾರಿ ಚೆನ್ನಕೇಶವರೆಡ್ಡಿ, ಶ್ರೀನಿವಾಸರೆಡ್ಡಿ, ವೆಂಕಟರಮಣಪ್ಪ ಹಾಗೂ ಪ್ರಗತಿಪರ ರೈತರು ಭಾಗವಹಿಸಿದ್ದರು.
