Chintamani : ಪರಿಶಿಷ್ಟ ಜಾತಿಯ ನೂರೊಂದು ಸಮುದಾಯಗಳಿಗೆ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ, ಮಾದಿಗ ಜಾಗೃತಿ ಸಮಿತಿ ಭಾನುವಾರ ಚಿಂತಾಮಣಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ (Dr. M.C. Sudhakar) ಅವರಿಗೆ ಮನವಿ ಸಲ್ಲಿಸಿತು. ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ದಲಿತರಿಗೆ ಸಾಮಾಜಿಕ ನ್ಯಾಯ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸಮಿತಿ ಆರೋಪಿಸಿದೆ.
ಸಮಿತಿಯ ಮುಖಂಡರು ಮಾತನಾಡಿ, ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳಿಗೆ ಒಳಮೀಸಲಾತಿ ಜಾರಿಗೊಳಿಸಲು ಅಧಿಕಾರ ನೀಡಿದ ಐತಿಹಾಸಿಕ ತೀರ್ಪು ಬಂದಿದ್ದು ಒಂದು ವರ್ಷವಾದರೂ, ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ ಎಂದು ಟೀಕಿಸಿದರು. ಸರ್ಕಾರ ನೇಮಕಾತಿ ಮಾಡದಿರುತ್ತೇವೆ ಎಂದು ಭರವಸೆ ನೀಡಿದ್ದರೂ, ಈಗ ವಿವಿಧ ಇಲಾಖೆಗಳು ನೇಮಕಾತಿ ಪ್ರಕಟಣೆ ಹೊರಡಿಸುತ್ತಿರುವುದು ಖಂಡನೀಯ ಎಂದು ಹೇಳಿದರು. ಹರಿಯಾಣದಲ್ಲಿ ತೀರ್ಪು ಬಂದ ತಕ್ಷಣವೇ ಒಳಮೀಸಲಾತಿ ಜಾರಿಗೆ ತಂದ ಉದಾಹರಣೆಯನ್ನು ನೀಡುತ್ತ, ಕಾಂಗ್ರೆಸ್ ಸರ್ಕಾರ ತನ್ನ ಬದ್ಧತೆಯನ್ನು ತೋರಿಸಲು ವಿಫಲವಾಗಿದೆ ಎಂದು ಆರೋಪಿಸಿದರು.
ಸಭೆಯಲ್ಲಿ ಪ್ರಗತಿಪರ ಚಿಂತಕ ಎನ್. ಕೃಷ್ಣಪ್ಪ, ಮುಖಂಡ ಜಂಗಮಶೀಗೇಹಳ್ಳಿ ದೇವರಾಜ್, ರಾಜಣ್ಣ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪೂಜಪ್ಪ, ಗಂಗಲಪ್ಪ, ಶೇಷಾದ್ರಿ, ಕೃಷ್ಣಪ್ಪ, ಬೀಡಾ ಶ್ರೀನಿವಾಸ್, ಬಿವಿ ವೆಂಕಟಾಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.









