Chintamani : ಚಿಂತಾಮಣಿ ತಾಲೂಕಿನ ವೈಜಕೂರು (Vaijakuru) ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ (cooperative society) ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ (no-confidence motion) ಸಭೆ ಬುಧವಾರ ಮಧ್ಯಾಹ್ನ 12 ಗಂಟೆಗೆ ನಡೆಯಬೇಕಾಗಿದ್ದ ಸಭೆಗೆ ಕರೆ ನೀಡಿದ್ದ ಅಧಿಕಾರಿಗಳು ಬಂದಿಲ್ಲ. ಅಧಿಕಾರಿಗಳ ವಿರುದ್ಧ ಸಭೆಗೆ ಆಗಮಿಸಿದ 8 ಸದಸ್ಯರು ಆಕ್ರೋಶವನ್ನು ವ್ಯಕ್ತಪಡಿಸಿದರು.
“ಸಂಘದಲ್ಲಿ 12 ನಿರ್ದೇಶಕರು ಇದ್ದಾರೆ. ಅದರಲ್ಲಿ 9 ನಿರ್ದೇಶಕರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿ, 2024 ರ ಅಕ್ಟೋಬರ್ 7 ರಂದು ಸಹಕಾರ ಇಲಾಖೆಯ ಸಹಾಯಕ ನಿಬಂಧಕರಿಗೆ ಪತ್ರ ನೀಡಿದ್ದಾರೆ. ಕ್ರಮಕೈಗೊಳ್ಳದ ಕಾರಣ, ಡಿಸೆಂಬರ್ 26 ರಂದು ಮತ್ತೊಂದು ಪತ್ರ ಬರೆಯಲಾಗಿತ್ತು. ಈ ಪತ್ರವನ್ನು ಕಚೇರಿಗೆ ಬರುವಂತೆ ಸೂಚಿಸಲಾಗಿತ್ತು. ಅದರಂತೆ, ಎಲ್ಲ 9 ನಿರ್ದೇಶಕರು ಚಿಕ್ಕಬಳ್ಳಾಪುರದ ಕಚೇರಿಗೆ ಹೋಗಿದ್ದೇವೆ,” ಎಂದು ನಿರ್ದೇಶಕ ರಮೇಶ್ ಹೇಳಿದರು.
“ಇಬ್ಬರು ಅಧಿಕಾರಿಗಳಿಗೆ ಸಭೆ ನಡೆಸುವಂತೆ ಸೂಚಿಸಲಾಗಿತ್ತು. ಆದರೆ ಅವರು ತಿಂಗಳವರೆಗೆ ಸಮಯ ತೆಗೆದು ಹಲವು ಕಾರಣಗಳ ಮೂಲಕ ತಪ್ಪಿಸಿಕೊಂಡಿದ್ದಾರೆ. ಅಂತಿಮವಾಗಿ, ಮಾರ್ಚ್ 3ರಂದು ಭವ್ಯ ಎಂಬ ಅಧಿಕಾರಿಯನ್ನು ನೇಮಕ ಮಾಡಿ, ಮಾರ್ಚ್ 19 ರಂದು ಮಧ್ಯಾಹ್ನ 12ಕ್ಕೆ ಸಭೆ ಕರೆದು, ನಿರ್ದೇಶಕರಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಯಾವ ಅಧಿಕಾರಿಯೂ 3 ಗಂಟೆವರೆಗೆ ಹಾಜರಾಗಲಿಲ್ಲ. ದೂರವಾಣಿ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ,” ಎಂದು ಅವರು ಆರೋಪಿಸಿದರು.
“ಬೈಲಾ ಪ್ರಕಾರ, ಮೂರನೇ ಎರಡನೇ ಭಾಗ ನಿರ್ದೇಶಕರು ಅವಿಶ್ವಾಸ ಮಂಡನೆ ಮಾಡಿದರೆ, ಅಧಿಕಾರಿಗಳು ಸಭೆ ಕರೆಯಲೇಬೇಕಾಗಿದೆ. ಆದರೆ 6 ತಿಂಗಳಿನಿಂದ ಕಾರಣವಿಲ್ಲದೆ ತೊಂದರೆ ಕೊಡುತ್ತಿದ್ದಾರೆ. ಅಧಿಕಾರಿಗಳು ರಾಜಕೀಯ ಗುಲಾಮರಂತೆ ಕೆಲಸ ಮಾಡುತ್ತಿದ್ದಾರೆ. ರೈತರ ಹಿತದೃಷ್ಟಿಯಿಂದ ಯಾವುದೇ ಕೆಲಸ ಮಾಡುತ್ತಿಲ್ಲ. ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ, ರಾಜೀನಾಮೆ ನೀಡಿ ಮನೆಗೆ ಹೋಗಿ. ರೈತರ ಪರವಾಗಿ ನಾವು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ,” ಎಂದು ಅವರು ಹೇಳಿದ್ದಾರೆ.









