Chikkaballapur : ಕೇಂದ್ರ ಸರ್ಕಾರ ತರುವ ಕಾರ್ಮಿಕ ವಿರೋಧಿ ಹೊಸ ಕಾನೂನುಗಳ ವಿರುದ್ಧ ಜುಲೈ 9ರಂದು ಕಾರ್ಮಿಕರು ಒಂದುಗೂಡಿ ಪ್ರತಿಭಟಿಸಲು (Workers Strike) ತಯಾರಿ ಮಾಡಿಕೊಂಡಿದ್ದಾರೆ. ಈ ದಿನದಂದು ಕೆಲಸ ಬಹಿಷ್ಕರಿಸಿ, ದೇಶಾದ್ಯಂತ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಸಿಐಟಿಯು (CITU) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಗಂಗಪ್ಪ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾಲ್ಕು ಹೊಸ ಕಾರ್ಮಿಕ ಕಾನೂನುಗಳು ಬಂದರೆ, ಕೆಲಸದ ಸ್ಥಳದಲ್ಲಿ ಕಾರ್ಮಿಕರ ಮೇಲೆ ಇನ್ನಷ್ಟು ಒತ್ತಡ ಬೀಳಲಿದೆ. ಈಗಾಗಲೇ ಸಂಕಷ್ಟದಲ್ಲಿರುವ ಕಾರ್ಮಿಕರು ಹೆಚ್ಚು ತೊಂದರೆಗೆ ಸಿಲುಕುತ್ತಾರೆ” ಎಂದು ಹೇಳಿದರು.
12 ಕಾರ್ಮಿಕ ಸಂಘಟನೆಗಳು ಜತೆಯಾಗಿ ಪ್ರತಿಭಟನೆಗೆ ಬೆಂಬಲ ನೀಡಿದ್ದು, ಚಿಕ್ಕಬಳ್ಳಾಪುರ ನಗರದ ವಾಪಸಂದ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗುತ್ತದೆ ಎಂದು ತಿಳಿಸಿದ್ದಾರೆ.
ಬಿಸಿಯೂಟ ನೌಕರರ ಸಂಘದ ಗೌರವಾಧ್ಯಕ್ಷ ಬಿ.ಎನ್. ಮುನಿಕೃಷ್ಣಪ್ಪ ಮಾತನಾಡುತ್ತಾ, “ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಕಾರ್ಮಿಕರನ್ನು ಬಲವಾಗಿ ಶೋಷಿಸುತ್ತಿವೆ. ಈ ಶೋಷಣೆಯ ವಿರುದ್ಧ ಧಿಕ್ಕಾರ ತೋರಬೇಕಾಗಿದೆ” ಎಂದು ಹೇಳಿದರು.
ಈ ಮಾಧ್ಯಮಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಜಯಮಂಗಳ, ಭಾಗ್ಯಮ್ಮ, ಮುನಿರತ್ನಮ್ಮ ಮತ್ತು ಎನ್. ಭಾರತಿ ಅವರುಗಳೂ ಉಪಸ್ಥಿತರಿದ್ದರು.
