Gauribidanur : ಗೌರಿಬಿದನೂರು ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಖಿಲ ಕರ್ನಾಟಕ ರೈತ ಸಂಘಟನೆ (Karnataka Raitha Sanghatane) ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರೈತರು ಅಧಿಕಾರಿಗಳಿಗೆ ಒತ್ತಾಯಿಸಿ (Farmer Protest) ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿ ಮಂಜುನಾಥ್ಗೆ ಮನವಿ ಪತ್ರ ಸಲ್ಲಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು ಕೃಷಿ ಉತ್ಪನ್ನ ಗಳನ್ನು ದಾಸ್ತಾನು ಮಾಡಲು ಅವಕಾಶ ನೀಡುತ್ತಿಲ್ಲ, ಕುರಿ, ಮೇಕೆ ಮಾರಾಟ ಮಾಡುವ ಸಂದರ್ಭದಲ್ಲಿ ₹5 ಸುಂಕದ ಬದಲಿಗೆ ಹೆಚ್ಚುವರಿಯಾಗಿ ₹15–₹20 ವಸೂಲಿ ಮಾಡುವ ಜೊತೆಗೆ ತರಕಾರಿ ಮಾರಾಟದ ಸಂದರ್ಭದಲ್ಲಿ ಶೇ 10ರಷ್ಟು ವಸೂಲಿ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡಿ, ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ದೂರಿದ ರೈತರು ತೊಗರಿ ಖರೀದಿ ಮಾಡುವ ನಗರದ ಮಿಲ್ಗೆ ತೊಗರಿ ಬೆಳೆ ನೀಡಿದಾಗ ಶೇ 35ರಷ್ಟು ಕಡಿತ ಮಾಡಲಾಗುತ್ತಿದೆ. ಬೇಳೆ ಹಿಂತಿರುಗಿಸುವಾಗ 3ನೇ ದರ್ಜೆಯ ಬೇಳೆ ನೀಡಲಾಗುತ್ತಿರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಇದರ ನಿಗ್ರಹಕ್ಕಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆಯ ಮುಂಭಾಗದಲ್ಲಿ ಸುಂಕ ವಸೂಲಿ ಮಾಡುವ ಬಗ್ಗೆ ಯಾವುದೇ ನಾಮಫಲಕ ಅಳವಡಿಸಿಲ್ಲ. ಇದರಿಂದ ರೈತರನ್ನು ದಲ್ಲಾಳಿಗಳು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಸಂಚಾಲಕ ರವೀಂದ್ರರೆಡ್ಡಿ, ನಾಗಭೂಷಣ್ ರೆಡ್ಡಿ, ಮಂಜುನಾಥ್, ಅಂಜನ್ ರೆಡ್ಡಿ, ಗಂಗರಾಜು, ನಂಜುಂಡಪ್ಪ, ಲಕ್ಷ್ಮಿನಾರಾಯಣ ರೆಡ್ಡಿ, ಶಾನ್ವಾಜ್ ಭಾಷಾ ಪಾಲ್ಗೊಂಡಿದ್ದರು.
