Gauribidanur : ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿಯಲ್ಲಿ (Vatadahosahalli) ಗ್ರಾಮೀಣ ಯುವ ಕಲಾ ಸಂಘದ ವತಿಯಿಂದ ಭಾನುವಾರ ನೆಲಮೂಲಕಲೆಗಳ ಪುನರುತ್ಥಾನ ಕಾರ್ಯಕ್ರಮ (Cultural Program) ಆಯೋಜಿಸಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜನಪದ ಕಲಾ ತಂಡಗಳಾದ ವೀರಗಾಸೆ, ಮಹಿಳಾ ಡೊಳ್ಳು ಕುಣಿತ, ಗಾರುಡಿ ಗೊಂಬೆ, ಕೀಲು ಕುದುರೆ, ಕರಡಿ ಕುಣಿತ, ತಮಟೆ ವಾದನ, ನಾಸಿಕ್ ಡೋಲು ಪ್ರದರ್ಶನ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಟಿ.ನಂಜುಂಡಪ್ಪ “ಆಧುನಿಕ ಸಮಾಜದಲ್ಲಿ ನೆಲಮೂಲ ಕಲೆಗಳು ಕಣ್ಮರೆಯಾಗುತ್ತಿರುವುದು ವಿಷಾದನೀಯ. ನಶಿಸಿ ಹೋಗುತ್ತಿರುವ ಇಂತಹ ಕಲೆಗಳನ್ನು ಉಳಿಸಿ ಬೆಳೆಸಬೇಕಾಗಿದೆ. ಗ್ರಾಮೀಣ ಭಾಗದ ಬಹುತೇಕ ಮಂದಿ ಅನಕ್ಷರಸ್ಥರಲ್ಲಿ ಅನೇಕ ವಿಧದ ಕಲೆ, ಸಾಹಿತ್ಯ, ಸಂಗೀತ ಸೇರಿದಂತೆ ಇತರ ಕಲೆಗಳು ಹಾಸುಹೋಕ್ಕಾಗಿದ್ದವು. ಜನಪದ ಸಾಹಿತ್ಯವೇ ಶಿಷ್ಠಸಾಹಿತ್ಯದ ಮೂಲವಾಗಿದ್ದು ಬಿ.ಎಂ.ಶ್ರೀ ಅವರು ಜನವಾಣಿ ಬೇರು ಕವಿವಾಣಿ ಹೂವು ಎಂದಿದ್ದಾರೆ. ನೆಲಮೂಲ ಕಲೆಗಳಾದ ತಮಟೆ, ಡೊಳ್ಳು ಕುಣಿತ, ವೀರಗಾಸೆ, ಪಟ್ಟದ ಕುಣಿತ, ಕೋಲಾಟ ಮತ್ತಿತರ ಕಲೆಗಳನ್ನು ಸಂರಕ್ಷಿಸಬೇಕಾಗಿದೆ” ಎಂದು ಹೇಳಿದರು.
ಗ್ರಾಮೀಣ ಯುವ ಕಲಾ ಸಂಘದ ಅಧ್ಯಕ್ಷ ಗೊಟ್ಲಗುಂಟೆ ವೆಂಕಟರಮಣಪ್ಪ, ತಾ.ಪಂ ಮಾಜಿ ಸದಸ್ಯ ರಾಜನಾಯಕ, ಗ್ರಾಮೀಣ ಯುವ ಕಲಾ ಸಂಘದ ಉಪಾಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಗಂಗರಾಜು, ಮುಖಂಡ ರೋಜಮ್ಮ, ಶಿವಮೂರ್ತಿ, ಶಮೀರ, ಎನ್.ಬಾಲಕೃಷ್ಣ, ನರಸಿಂಹಮೂರ್ತಿ, ತಿಮ್ಮರಾಜು, ನಾರಾಯಣಪ್ಪ, ಮಂಜುನಾಥ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
