Gudibande : ಗುಡಿಬಂಡೆ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿಯ (Valmiki Jayanti) ಪೂರ್ವ ಭಾವಿ ಸಭೆ (Preliminary Meeting)ನಡೆಯಿತು. ಪಟ್ಟಣದ ಪ್ರೌಢಶಾಲಾ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪ್ರತಿ ಗ್ರಾಮ ಪಂಚಾಯಿತಿಗೆ ಒಂದೊಂದು ಬೆಳ್ಳಿರಥದ ಮೂಲಕ ಪಲ್ಲಕ್ಕಿ ಮೆರವಣಿಗೆ ಮಾಡಬೇಕೆಂದು ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದ ತಹಶೀಲ್ದಾರ್ ಮನೀಷ್ “ಸೋಮವಾರ ನಡೆದ ಸಭೆಯಲ್ಲಿ ಹಲವಾರು ವರ್ಷಗಳಿಂದ ವಾಲ್ಮೀಕಿ ಸಮುದಾಯದ ಬೇಡಿಕೆ ಈಡೇರಿಸಿಲ್ಲ ಎಂದು ಆರೋಪಿಸಿ ಅಕ್ಟೋಬರ್ 28ರಂದು ನಡೆಯುವ ವಾಲ್ಮೀಕಿ ಜಯಂತಿಯನ್ನು ಬಹಿಷ್ಕರಿಸುವುದಾಗಿ ತಿಳಿಸಿದ್ದರು. ಸಮುದಾಯದ ಬೇಡಿಕೆಗಳನ್ನು ಒಂದೊಂದಾಗಿ ನೆರವೇರಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಈಗಾಗಲೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಶಾಸಕ ರೊಂದಿಗೆ ಈ ಕುರಿತು ಸಮಾಲೋಚನೆ ನಡೆಸಿದ್ದು ಸಮುದಾಯದ ಮುಖಂಡರ ಬೇಡಿಕೆಯನ್ನು ಶಾಸಕರು ಜಯಂತಿಯಂದು ಸಮುದಾಯಕ್ಕೆ ಭೂಮಿ ಹಸ್ತಾಂತರ ಮಾಡಿ, ಡಿಸೆಂಬರ್ಲ್ಲಿ ಭೂಮಿಪೂಜೆ ನೆರವೇರಿಸಲು ಶಾಸಕರು ಭರವಸೆ ನೀಡಿದ್ದಾರೆ. ವಾಲ್ಮೀಕಿ ಭವನ ನಿರ್ಮಾಣಕ್ಕೆ ಈಗಾಗಲೇ 30 ಗುಂಟೆ ಜಮೀನು ಹಾಗೂ ₹1.5 ಕೋಟಿ ಅನುದಾನಕ್ಕೆ ಅವಕಾಶವಿದೆ. ಹೆಚ್ಚುವರಿಯಾಗಿ ಇನ್ನು 20 ಗುಂಟೆ ಜಮೀನನ್ನು ಈಗಾಗಲೇ ನೀಡಲಾಗಿದೆ. ₹2ಕೋಟಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗುವುದು” ಎಂದು ತಿಳಿಸಿದರು.
ತಾಪಂ ಇಒ ಹೇಮಾವತಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಜಯಣ್ಣ, ಬಿಸಿಎಂ ಇಲಾಖೆಯ ಅಧಿಕಾರಿ ರಾಮಯ್ಯ, ಪಿಎಸ್ಐ ನಾಗರಾಜ್, ವಾಲ್ಮೀಕಿ ಸಮುದಾಯದ ತಾಲ್ಲೂಕು ಅಧ್ಯಕ್ಷ ನಿಚ್ಚನಬಂಡಹಳ್ಳಿ ಗಂಗಾಧರ್, ಕೆ.ವಿ. ನಾರಾಯಣಸ್ವಾಮಿ, ದಿವಾಕರ್, ಪಶು ಆಸ್ಪತ್ರೆಯ ಅಧಿಕಾರಿ ರವಿಚಂದ್ರ ಉಪಸ್ಥಿತರಿದ್ದರು.