Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಧ್ಯಕ್ಷತೆಯಲ್ಲಿ KPME ಮತ್ತು PCPNDT ನೋಂದಣಿ ಹಾಗೂ ಕುಂದುಕೊರತೆ ನಿವಾರಣಾ ಸಮಿತಿ ಸಭೆ (Meeting) ನಡೆಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು “ಜಿಲ್ಲೆಯಲ್ಲಿ ಲಿಂಗಾನುಪಾತದ ಪ್ರಮಾಣ ಹೆಚ್ಚಿಸಬೇಕಾಗಿದ್ದು 2022ನೇ ಸಾಲಿನಲ್ಲಿ 1000 ಪುರುಷರಿಗೆ 870 ಮಹಿಳೆಯರಿದ್ದರು. 2023ನೇ ಸಾಲಿನಲ್ಲಿ 936ಕ್ಕೆ ಹೆಚ್ಚಳವಾಗಿದೆ. ಈ ವರ್ಷ 969ಕ್ಕೆ ಹೆಚ್ಚಳ ಮಾಡಿ ಲಿಂಗಾನುಪಾತ ಪ್ರಮಾಣ ತರುವ ಗುರಿ ಹೊಂದಲಾಗಿದೆ. ಪ್ರತಿವರ್ಷ ಲಿಂಗಾನುಪಾತ ಪ್ರಮಾಣ ಸರಿದೂಗಿಸಿ 1000 ಪುರುಷರಿಗೆ 1000 ಮಹಿಳೆಯರು ಇರುವ ಹಾಗೆ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದು ಜವಾಬ್ದಾರಿಯಾಗಿದೆ. ಜಿಲ್ಲೆಯಲ್ಲಿರುವ 70 ಭ್ರೂಣ ಲಿಂಗಪತ್ತೆ (ಸ್ಕ್ಯಾನಿಂಗ್) ಕೇಂದ್ರಗಳ ಮಾಲೀಕರು, ಮುಖ್ಯಸ್ಥರು, ರೇಡಿ ಯಾಲಜಿಸ್ಟ್ ತಜ್ಞರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಏರ್ಪಡಿಸಿ ಜಾಗೃತಿ ಮೂಡಿಸಬೇಕು. ಕೆ.ಪಿ.ಎಂ.ಇ ನಿಯಮದಡಿ ಜಿಲ್ಲೆಯಲ್ಲಿ 251 ಸಂಸ್ಥೆಗಳು ನೋಂದಣಿಯಾಗಿದ್ದು ಆ ಸಂಸ್ಥೆಗಳಲ್ಲಿನ ಚಿಕಿತ್ಸಾ ಪದ್ಧತಿಗೆ ಅನುಗುಣವಾಗಿ ನಾಮಫಲಕ ಅಳವಡಿಸಬೇಕು” ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್, ಜಿಲ್ಲಾ ಮಟ್ಟದ ವೈದ್ಯಾಧಿಕಾರಿಗಳು, ತಾಲ್ಲೂಕು ಮಟ್ಟದ ವೈದ್ಯಾಧಿಕಾರಿಗಳು, ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಸದ್ಯಸರು, ಜಿಲ್ಲಾ ತಪಾಸಣಾ ಮತ್ತು ಮೇಲ್ವಚಾರಣೆ ಸಮಿತಿ ಅಧ್ಯಕ್ಷರು ಮತ್ತು ಸದ್ಯಸರು ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.