Chikkaballapur : ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಮಹಾ ಶಿವರಾತ್ರಿ (Maha Shivarathri) ಪ್ರಯುಕ್ತ ಶುಕ್ರವಾರ ಶಿವನ ದೇಗುಲಗಳಲ್ಲಿ ರುದ್ರಾಭಿಷೇಕ, ವಿಶೇಷ ಪೂಜಾ ಕಾರ್ಯಗಳು ನಡೆದವು. ಶಿವರಾತ್ರಿಯ ಅಂಗವಾಗಿ ಭಕ್ತರು ಉಪವಾಸ ಜಾಗರಣೆಗಳ ಮೂಲಕ ಶಿವ ನಾಮಸ್ಮರಣೆ ಮಾಡಿದರು.
ತಾಲ್ಲೂಕಿನ ನಂದಿ ಗ್ರಾಮದ ಭೋಗ ನಂದೀಶ್ವರ, ನಂದಿ ಗಿರಿಧಾಮದ ಯೋಗ ನಂದೀಶ್ವರ, ಅಗಲಗುರ್ಕಿಯ ಈಶ ಯೋಗ ಕೇಂದ್ರ, ನಗರದ ಎಂ.ಜಿ.ರಸ್ತೆಯ ಮರುಳಸಿದ್ದೇಶ್ವರ, ಪಾಪಾಗ್ನಿ ಮಠ, ಕೃಷ್ಣ ಚಿತ್ರಮಂದಿರ ರಸ್ತೆಯ ಪ್ರಸನ್ನೇಶ್ವರ ದೇವಸ್ಥಾನ, ಭುವನೇಶ್ವರಿ ವೃತ್ತದ ಗಂಗಾಧರೇಶ್ವರ ಸ್ವಾಮಿ ದೇಗುಲಗಳಿಗೆ ಭಕ್ತರು ಬೆಳಿಗ್ಗೆಯಿಂದಲೇ ಭೇಟಿ ನೀಡಿ ದೇವರ ದರ್ಶನ ಪಡೆದರು. ಶಿವರಾತ್ರಿ ಪ್ರಯುಕ್ತ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರದ ಜತೆಗೆ ಹೂ, ಬಿಲ್ವಪತ್ರೆಗಳಿಂದ ಅರ್ಚನೆಗಳು ನೆರವೇರಿದವು.
ಗೌರಿಬಿದನೂರು :

ಗೌರಿಬಿದನೂರು ನಗರದ ಗೌರಿವಲ್ಲಭೇಶ್ವರನ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು. ಆತ್ಮಲಿಂಗಕ್ಕೆ ಕ್ಷೀರಾಭಿಷೇಕ ಮಾಡಲಾಯಿತು. ಮಹಾಗಣಪತಿ, ನವಗ್ರಹ, ದಕ್ಷಿಣಾಮೂರ್ತಿ, ವಿಗ್ರಹಕ್ಕೆ ಭಕ್ತರು ಪೂಜೆ ಸಲ್ಲಿಸಿದರು.
ಶಿಡ್ಲಘಟ್ಟ :

ಶಿಡ್ಲಘಟ್ಟ ನಗರ ಹಾಗೂ ತಾಲ್ಲೂಕಿನಾದ್ಯಂತ ಶಿವರಾತ್ರಿ ಅಂಗವಾಗಿ ಶಿವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ರುದ್ರಾಭಿಷೇಕದೊಂದಿಗೆ ಪೂಜೆ ನಡೆಯಿತು. ಭಕ್ತರು ಅಶೋಕ ರಸ್ತೆಯಲ್ಲಿರುವ ಕೋಟೆ ಸೋಮೇಶ್ವರ ಮತ್ತು ಪೇಟೆ ನಗರೇಶ್ವರ, ಕಾಶಿ ವಿಶ್ವನಾಥೇಶ್ವರ, ಅಗ್ರಹಾರ ಬೀದಿಯ ಜಲಕಂಠೇಶ್ವರ ಮತ್ತು ಏಕಾಂಬರೇಶ್ವರ ದೇವಾಲಯ ದರ್ಶಿಸಿ ವೀರಾಪುರದ ಗವಿಗಂಗಾಧರೇಶ್ವರ ಮತ್ತು ಬೂದಾಳದ ಮಲೆಮಲ್ಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಚೇಳೂರು :

ಚೇಳೂರು ತಾಲ್ಲೂಕಿನಾದ್ಯಂತ ಶುಕ್ರವಾರ ಭಕ್ತರು ಕಾಶಿ ವಿಶ್ವೇಶ್ವರ ದೇವಾಲಯದಲ್ಲಿ ಶಿವನಿಗೆ ವಿಶೇಷ ಅಲಂಕಾರ ಮಾಡಿ ಸಂಭ್ರಮದಿಂದ ಮಹಾಶಿವರಾತ್ರಿ ಆಚರಿಸಿದರು.
ಬಾಗೇಪಲ್ಲಿ :

ಬಾಗೇಪಲ್ಲಿ ಪಟ್ಟಣದ ಈಶ್ವರ, ಜಡಲಭೈರವೇಶ್ವರ, ಪರಗೋಡು ಪಂಚಲಿಂಗೇಶ್ವರ, ಪಾತಪಾಳ್ಯ ಬಳಿ ಇರುವ ಹಿರಿಣ್ಯೇಶ್ವರ ದೇವಾಲಯ ಸೇರಿದಂತೆ ತಾಲ್ಲೂಕಿನ ದೇವಾಲಯಗಳಲ್ಲಿ ಶುಕ್ರವಾರ ಮಹಾಶಿವರಾತ್ರಿ ಪ್ರಯುಕ್ತ ರುದ್ರಾಭಿಷೇಕ, ವಿವಿಧ ಪೂಜಾ ಕೈಂಕರ್ಯ ನಡೆಯಿತು.
