Chikkaballapur : ನಂದಿಬೆಟ್ಟದಲ್ಲಿ ಜುಲೈ 2ರಂದು ಸಚಿವ ಸಂಪುಟ ಸಭೆ (Cabinet Meeting) ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ವೈ.ನವೀನ್ ಭಟ್ ಸೋಮವಾರ ನಂದಿಬೆಟ್ಟ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಭೇಟಿ ನೀಡಿ (ZP CEO Visit) ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಡಾ. ವೈ.ನವೀನ್ ಭಟ್ “ಸಚಿವ ಸಂಪುಟ ಸಭೆಗೂ ಮುನ್ನ ನಂದಿಯ ಭೋಗನಂದೀಶ್ವರ ದೇವಾಲಯಕ್ಕೆ ಗಣ್ಯರು ಭೇಟಿ ನೀಡಲಿದ್ದು ಈ ವೇಳೆ ಗಣ್ಯರಿಗೆ ಶಿಷ್ಟಾಚಾರ ರೀತಿ ಆತಿಥ್ಯ ನೀಡಲಾಗುತ್ತದೆ. ಗಣ್ಯರು ಭೇಟಿ ನೀಡುವ ಸ್ಥಳಗಳು ಹಾಗೂ ರಸ್ತೆಗಳ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳು ಇದ್ದಲ್ಲಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಗಿರಿಧಾಮಕ್ಕೆ ಸಂಚರಿಸುವ ರಸ್ತೆಯ ತಿರುವುಗಳಲ್ಲಿ ಅಗತ್ಯವಿರುವ ಕಡೆ ಸೂಚನಾ ಫಲಕ ಅಳವಡಿಸಬೇಕು” ಎಂದು ಸಚಿವ ಸಂಪುಟ ಸಭೆಯ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್ ಮಂಜುನಾಥ್, ಸಹಾಯಕ ನಿರ್ದೇಶಕ ರಫೀಕ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ರವಿಕುಮಾರ್, ಮೋಹನ್ ಕುಮಾರ್, ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.









