
Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಸಪ್ತಾಹ ಹಾಗೂ ಪೋಷಣ್ ಮಾಸಾಚರಣೆ ಅಂಗವಾಗಿ ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹದ ಕಾರ್ಯಕ್ರಮದಲ್ಲಿ (National Nutrition Week) ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್ ಅವರು ಮಾತನಾಡಿದರು.
ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹದ ಮೂಲಕ ಅಪೌಷ್ಟಿಕತೆ ವಿರುದ್ಧ ಹೋರಾಡಲು ವ್ಯಾಪಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ಸಹಕರಿಸಬೇಕು, ಜತೆಗೆ ಇದರ ಉಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಲು ಗರ್ಭಿಣಿ ಬಾಣಂತಿಯರಿಗೆ ಮತ್ತು ಶಿಶು, ಮಗುವಿನ ಪ್ರಾಯದಲ್ಲಿ ಸಮರ್ಪಕವಾಗಿ ಪೌಷ್ಟಿಕ ಆಹಾರವನ್ನು ನೀಡಬೇಕು ಎಂದರು.
ಸಿಡಿಪಿಒ ನವತಾಜ್ ಮಾತನಾಡಿ, ಸೆಪ್ಟೆಂಬರ್ನಲ್ಲಿ ಪೌಷ್ಟಿಕ ಆಹಾರ ಮಾಸಾಚಾರಣೆ ನಿಮಿತ್ತ ಪ್ರತಿವಾರ ನಾನಾ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕನಿಷ್ಠ 2 ವರ್ಷಗಳವರೆಗೆ ಎದೆ ಹಾಲು ನೀಡುವುದರಿಂದ ಮಗು ಸಶಕ್ತವಾಗಿ ಮತ್ತು ಆರೋಗ್ಯವಾಗಿ ಬೆಳೆಯಲು ಸಹಾಯಕವಾಗುತ್ತದೆ. ಆರು ತಿಂಗಳಿನಿಂದ ಪೂರಕ ಆಹಾರ ಪಡೆಯುವ ಮಗು ಉತ್ತಮ ಬೆಳವಣಿಗೆ ಹೊಂದುತ್ತದೆ. ಮನೆಯಲ್ಲಿಯೇ ತಯಾರಿಸಿದ ಮಂದವಾದ ಮೃದು ಸಾಂಧ್ರತೆಯಿರುವ ಚಮಚೆಯಲ್ಲಿ ಸುಲಭವಾಗಿ ನಿಲ್ಲುವ ಆಹಾರ ಸುಲಭವಾಗಿ ಜೀರ್ಣಗೊಂಡು ಮಗುವಿನ ಹೊಟ್ಟೆ ತುಂಬಿಸುತ್ತದೆ ಎಂದರು.
ದ್ವಿದಳ ಧಾನ್ಯ-ಬಟಾಣಿ ಬೀನ್ಸ್, ಅವರೆ ಮತ್ತು ಬೇಳೆ ಕಾಳುಗಳು ಪೌಷ್ಟಿಕಾಂಶದ ಉತ್ತಮ ಮೂಲಗಳು. ವಿಟಮಿನ್ ಸಿ ಹೆಚ್ಚಿರುವ ಆಹಾರಗಳು ಕಬ್ಬಿಣಾಂಶದ ಹೀರುವಿಕೆಗೆ ಸಹಕಾರಿ, ದಟ್ಟ ಹಸಿರೆಲೆಗಳು ಮತ್ತು ಕಿತ್ತಳೆ ಬಣ್ಣದ ಹಣ್ಣುಗಳು ಮತ್ತು ತರಕಾರಿಗಳು ವಿಟಮಿನ್ ಎ ನಿಂದ ಸಂಪದ್ಭರಿತವಾಗಿದೆ. ಬೆಳೆಯುವ ಮಗುವಿಗೆ ಮೇಲಿಂದ ಮೇಲೆ ಅಲ್ಪ ಆಹಾರದ ಅವಶ್ಯಕತೆ ಇರುತ್ತದೆ. ನಾನಾ ರೀತಿಯ ಆಹಾರ ನೀಡಬೇಕು, ಬೆಳೆಯುವ ಮಗುವಿಗೆ ಆಹಾರ ಪ್ರಮಾಣದಲ್ಲಿ ಏರಿಕೆ ಅಗತ್ಯವಿದೆ. ಬೆಳೆಯುತ್ತಿರುವ ಮಗುವಿಗೆ ತಾನೇ ತಿನ್ನಲು ಕಲಿಸಿ ಪ್ರೋತ್ಸಾಹಿಸಿರಿ ಎಂದು ಸಲಹೆ ನೀಡಿದರು.
ಎಸಿಡಿಪಿಒ ಮಹೇಶ್, ಪಿಡಿಒ ಶಾರದಾ, ಐ.ಎಚ್.ಆರ್.ಎಂ ಶಿವಕುಮಾರ್, ಮೇಲ್ವಿಚಾರಕಿ ರಾಧಾ, ಅಂಗನವಾಡಿ ಕಾರ್ಯಕರ್ತೆಯರಾದ ಅರುಣಾ, ವಿಜಯಮ್ಮ, ಆಶಾ, ಕಾಂತಮ್ಮ ಹಾಜರಿದ್ದರು.