Home Sidlaghatta ಶಿಡ್ಲಘಟ್ಟದ ಡಾಲ್ಫಿನ್ ಪಿಯು ಕಾಲೇಜಿನಲ್ಲಿ ವಿಶ್ವ ತಂಬಾಕು ನಿಷೇಧ ದಿನಾಚರಣೆ

ಶಿಡ್ಲಘಟ್ಟದ ಡಾಲ್ಫಿನ್ ಪಿಯು ಕಾಲೇಜಿನಲ್ಲಿ ವಿಶ್ವ ತಂಬಾಕು ನಿಷೇಧ ದಿನಾಚರಣೆ

0
197

Sidlaghatta : ವಿವಿಧ ರೂಪಗಳಲ್ಲಿ ಸಿಗುವ ಬೀಡಿ ಸಿಗರೇಟ್ ಮುಂತಾದ ತಂಬಾಕು ಪದಾರ್ಥಗಳ ಸೇವನೆಯಿಂದ ನಾನಾ ರೀತಿಯ ಕ್ಯಾನ್ಸರ್ ರೋಗಗಳು ಕಾಡುತ್ತವೆ. ಇದರಿಂದ ಕ್ಯಾನ್ಸರ್ ಪೀಡಿತ ರೋಗಿಗಳಷ್ಟೆ ಅಲ್ಲ ಅವರ ಕುಟುಂಬದವರು ಕೂಡ ಕಡು ಕಷ್ಟಕ್ಕೆ ಸಿಲುಕುತ್ತಾರೆ ಎಂದು ಹಿರಿಯ ಸಿವಿಲ್ ನ್ಯಾಯಾಶ ಮೊಹಮ್ಮದ್ ರೋಷನ್ ಷಾ ತಿಳಿಸಿದರು.

ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರದ ಡಾಲ್ಫಿನ್ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ವಿಶ್ವ ತಂಬಾಕು ನಿಷೇಧ ದಿನಾಚರಣೆ”ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾನ್ಯವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಹದಿ ಹರೆಯದವರನ್ನು ಆಕರ್ಷಿಸುವ ಅನೇಕ ಮಾದರಿಯ ತಂಬಾಕು ಪದಾರ್ಥಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಜಾಹೀರಾತುಗಳಿಂದ, ಈಗಾಗಲೆ ತಂಬಾಕು ಪದಾರ್ಥಗಳನ್ನು ಸೇವಿಸುತ್ತಿರುವ ಸ್ನೇಹಿತರ ಒತ್ತಾಯಕ್ಕೆ ಇಲ್ಲವೇ ಎಲ್ಲವನ್ನೂ ಅನುಭವಿಸುವ ಮನೋಭಾವದಿಂದ ಆರಂಭದಲ್ಲಿ ತಂಬಾಕು ಪದಾರ್ಥಗಳನ್ನು ಸೇವಿಸಲು ಆರಂಭಿಸುತ್ತಾರೆ.ಆದರೆ ನಂತರ ಅದು ಚಟವಾಗಿ ತಂಬಾಕು ಪದಾರ್ಥಗಳನ್ನು ಸೇವಿಸಲಿಲ್ಲ ಎಂದರೆ ನಡೆಯಲು ಓಡಾಡಲು ದೈನಂದಿನ ಕೆಲಸ ಕಾರ್ಯಗಳನ್ನು ಮಾಡಲು ಕೂಡ ಆಗದಷ್ಟು ನಿತ್ರಾಣಗೊಳ್ಳುವಷ್ಟು ಮಟ್ಟಿಗೆ ತಂಬಾಕು ಸೇವನೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕೆಡಿಸುತ್ತದೆ ಎಂದು ವಿವರಿಸಿದರು.

ಸಾಮಾನ್ಯವಾಗಿ ಹದಿ ಹರೆಯದ ವಯಸ್ಸಿನಲ್ಲಿ ಎಲ್ಲವನ್ನೂ ನೋಡುವ, ತಿಳಿದುಕೊಳ್ಳುವ, ಅನುಭವಿಸುವ ಭಾವನೆ ಇರುತ್ತದೆ. ಜತೆಗೆ ಸ್ನೇಹಿತರ ಒತ್ತಾಯಕ್ಕೆ ಮಣಿದು ತಂಬಾಕು ಸೇವನೆ ಮಾಡುವುದನ್ನು ಆರಂಭಿಸಿ ಕೊನೆಗೆ ಬದುಕು ದುರಂತದಲ್ಲಿ ಅಂತ್ಯವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಾಗಾಗಿ ನೀವು ಯಾರು ಕೂಡ ಯಾವುದೆ ರೂಪದ ತಂಬಾಕು ಪದಾರ್ಥಗಳನ್ನು ಯಾವುದೆ ಕಾರಣಕ್ಕೂ ಸೇವಿಸಬೇಡಿ. ಮನೆಯಲ್ಲಿ ಯಾರಾದರೂ ಹಿರಿಯರು ಬೀಡಿ ಸಿಗರೇಟು ಕಡ್ಡಿಪುಡಿ ಪಾನ್ ಪರಾಗ್ ಜರ್ಧಾದಂತ ತಂಬಾಕು ಪದಾರ್ಥಗಳನ್ನು ಸೇವಿಸುತ್ತಿದ್ದರೆ ಅವರಿಗೆ ಅವುಗಳನ್ನ ಸೇವಿಸದಂತೆ ಹಾಗೂ ಅದರಿಂದ ಆಗುವ ಅನಾಹುತಗಳ ಬಗ್ಗೆ ಮನವರಿಕೆ ಮಾಡಿಕೊಡಿ ಎಂದು ಹೇಳಿದರು.

ತಂಬಾಕು ಪದಾರ್ಥಗಳ ಸೇವನೆಯಿಂದ ಸೇವಿಸುವವರ ಬದುಕು ಮಾತ್ರ ಕಷ್ಟಕ್ಕೆ ಸಿಕ್ಕಿಕೊಳ್ಳುವುದಿಲ್ಲ ಬದಲಿಗೆ ಅವರನ್ನು ಅವಲಂಬಿಸಿರುವ ಮತ್ತು ಅವರು ಅವಲಂಬಿಸಿರುವ ಕುಟುಂಬದ ಎಲ್ಲರು ವಿವಿಧ ರೀತಿಯ ಆರ್ಥಿಕ, ಸಾಮಾಜಿಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಾವೆಲ್ಲರೂ ಕೂಡ ಸ್ಪರ್ಧಾ ಜಗತ್ತಿನಲ್ಲಿ ಬದುಕನ್ನು ನಡೆಸುತ್ತಿದ್ದೇವೆ. ಅದು ವಿದ್ಯಾರ್ಥಿಗಳಾಗಿರಬಹುದು, ರೈತರು, ಶ್ರಮಿಕರು, ಕಾರ್ಮಿಕರು, ಉದ್ಯೋಗಿಗಳು, ಉದ್ಯಮಿಗಳು ಯಾರೇ ಆಗಲಿ ಸ್ಪರ್ಧೆಯನ್ನು ಎದುರಿಸಿಯೆ ಬದುಕಿನಲ್ಲಿ ಮುನ್ನಡೆಯಬೇಕು ಎಂದರೆ ಮೊದಲು ದೈಹಿಕವಾಗಿ ಮಾನಸಿಕವಾಗಿ ಆರೋಗ್ಯವಂತರಾಗಿರಬೇಕು.

ಆದ್ದರಿಂದ ಎಲ್ಲರು ಕೂಡ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಿ, ಉತ್ತಮ ಸಮಾಜವನ್ನು ನಿರ್ಮಿಸಲು ನೆರವಾಗಿ ಎಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.

ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ್ ಮಾತನಾಡಿ, ಮಾರುಕಟ್ಟೆಯಲ್ಲಿ ಸಿಗುವ ತಂಬಾಕು ಪದಾರ್ಥಗಳು ಯಾವ ಯಾವ ರೂಪದಲ್ಲಿ ಸಿಗುತ್ತವೆ. ಅವುಗಳ ಸೇವನೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳು, ತಂಬಾಕು ಚಟಕ್ಕೆ ಬಿದ್ದವರಿಂದ ಸಮಾಜಕ್ಕೆ ಆಗುವ ಅನಾಹುತಗಳ ಬಗ್ಗೆ ಕಾಲೇಜು ವಿದ್ಯಾರ್ಥಿಗಳಿಗೆ ವಿವರಿಸಿದರು.

ತಂಬಾಕು ಪದಾರ್ಥಗಳಲ್ಲಿ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಹಾನಿಕಾರಕ ಅಂಶಗಳು ಇರುತ್ತವೆ. ಮುಖ್ಯವಾಗಿ ಕ್ಯಾನ್ಸರ್‌ ನ್ನು ಹೆಚ್ಚಿಸುವ ಅಂಶ ಹೆಚ್ಚು ಇರುತ್ತದೆ. ಹಾಗಾಗಿ ತಂಬಾಕು ಪದಾರ್ಥಗಳಿಂದ ಬದುಕಿನ ಉದ್ದಕ್ಕೂ ದೂರವಿರಿ, ಇತರರನ್ನು ದೂರವಿರಿಸಿ ಎಂದು ಮನವಿ ಮಾಡಿದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎಸ್.ರಂಜಿತಾ, ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮನೋಹರ್, ಸಿಪಿಐ ಎಂ.ಶ್ರೀನಿವಾಸ್, ಪ್ಯಾನೆಲ್ ವಕೀಲರಾದ ರಾಮಕೃಷ್ಣ, ಆರ್.ವಿ.ವೀಣಾ, ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್, ಡಾಲ್ಫಿನ್ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್.ಅಶೋಕ್, ಪ್ರಿನ್ಸಿಪಾಲ್ ಡಾ.ಶ್ರೀನಿವಾಸಮೂರ್ತಿ ಹಾಜರಿದ್ದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!