Home Sidlaghatta ವಿಶ್ವ ಸ್ಕಿಜೋಪ್ರೀನಿಯಾ ಅರಿವು ಸಪ್ತಾಹಕ್ಕೆ ಚಾಲನೆ

ವಿಶ್ವ ಸ್ಕಿಜೋಪ್ರೀನಿಯಾ ಅರಿವು ಸಪ್ತಾಹಕ್ಕೆ ಚಾಲನೆ

0
268

Sidlaghatta : ಮಾನಸಿಕ ಸ್ವಾಸ್ಥ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡು, ಎಲ್ಲರಿಂದಲೂ ದೂರವಾಗಿ ನರಕದ ಬದುಕನ್ನು ನೆಡೆಸುತ್ತಿರುವ ಅಸಂಖ್ಯ ಮಂದಿಯ ಬಗ್ಗೆ ಕರುಣೆ ತೋರಿಸುವ, ಅವರ ಸಮಸ್ಯೆಯನ್ನು ಅರಿಯುವ, ಆಲಿಸುವ, ಚಿಕಿತ್ಸೆ ಕೊಡಿಸುವ ಮಹತ್ವದ ದಿನವಿದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ತಿಳಿಸಿದರು.

ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ “ವಿಶ್ವ ಸ್ಕಿಜೋಪ್ರೀನಿಯಾ ಅರಿವು ಸಪ್ತಾಹ 2024” ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮೆದುಳಿನ ವಿಪರೀತ ನರ ದೌರ್ಬಲ್ಯಗಳಿಂದ ಈ ಸಮಸ್ಯೆ ಕಂಡು ಬರುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ, ಮನೆಯವರ ಪ್ರೀತಿ ಮಮತೆ ದೊರಕಿದರೆ ಸ್ಕಿಜೋಪ್ರೀನಿಯಾ ಕಾಯಿಲೆಯಿರುವವರು ಕೂಡ ಮತ್ತೆ ಮೊದಲಿನಂತಾಗಲು ಸಾಧ್ಯ.

ಹಿಂದೆಲ್ಲಾ ಕುಟುಂಬದ ಸದಸ್ಯನಿಗೆ ಈ ಸಮಸ್ಯೆ ಬಂದಾಗ ಬೇರೆ ಯಾವುದೇ ಪರಿಹಾರ ದೊರಕಿಸಿಕೊಳ್ಳಲು ಅವರಿಗೆ ತಿಳಿಯುತ್ತಿರಲಿಲ್ಲ. ಅದಕ್ಕೆ ದೈವ ಭೂತದ ಉಪದ್ರ ಎಂಬ ಪಟ್ಟ ಕಟ್ಟಿ, ಸರಪಳಿ, ಚೈನುಗಳಿಂದ ಬಂಧಿಸಿ ಪ್ರಾಣಿಗಳ ಹಾಗೇ ಅವರನ್ನು ಹಿಂಸಿಸಿ ನರಕ ಮಾಡಲಾಗುತಿತ್ತು. ಆದರೆ ಈಗ ಕಾಲ ಬದಲಾಗಿದೆ. ಸ್ಕಿಜೋಪ್ರೀನಿಯಾಕ್ಕೆ ಚಿಕಿತ್ಸೆಗಳು ಲಭ್ಯವಿದೆ. ಆರಂಭದಲ್ಲೇ ಈ ಸಮಸ್ಯೆಯನ್ನು ಗುರುತಿಸಿ ಮನೋವೈದ್ಯರನ್ನು ಕಂಡು ಸರಿಯಾದ ಚಿಕಿತ್ಸೆ ಪಡೆದರೆ ಖಂಡಿತಾ ವಾಸಿಯಾಗುತ್ತದೆ ಎಂದು ಹೇಳಿದರು.

ಇಂದು ಬಹುಮುಖ್ಯವಾದ ವಿಶ್ವ ಸ್ಕಿಜೋಪ್ರೀನಿಯಾ ದಿನ. ಇದೊಂದು ಮಾನಸಿಕ ಸಮಸ್ಯೆ ಎಂಬ ಅರಿವೆ ಇರದ ಅದೆಷ್ಟೂ ಮಂದಿ ನಮ್ಮ ನಡುವೆ ಇದ್ದಾರೆ. ಹಾಗಾಗಿ ಈ ಸಮಸ್ಯೆಯ ಬಗ್ಗೆ ಅರಿಯುವ, ಈ ಸಮಸ್ಯೆ ಇರುವವರ ಬಗ್ಗೆ ಅಂತಃಕರಣದ ಕಾಳಜಿ ತೋರುವ ಮಹತ್ವದ ದಿನ ಇಂದು. ಈ ಸಮಾಜ ವೈರುಧ್ಯಗಳ ಸಂತೆ. ಇಲ್ಲಿರುವ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಈ ಸಮಸ್ಯೆ ಇರುವವರ ಬಗ್ಗೆ ಒಂದಿನಿತು ಪ್ರೀತಿ, ಕರುಣೆ, ಮಮತೆ ತೋರಿಸಿದರೆ, ನಮ್ಮ ಮನಸ್ಸು ಅವರ ಬಗ್ಗೆ ಚೂರು ಮಿಡಿದರೆ, ನೊಂದರೆ ಈ ದಿನಕ್ಕೊಂದು ಅರ್ಥ ಬಂದೀತು ಎಂದು ವಿವರಿಸಿದರು.

ಆರೋಗ್ಯ ನಿರೀಕ್ಷಕ ದೇವರಾಜ್ ಮಾತನಾಡಿ, ಸ್ಕಿಜೋಪ್ರೀನಿಯಾ ಕಾಯಿಲೆಯಲ್ಲಿ ಮನಸ್ಸಿನ ಕ್ರಿಯೆಗಳಲ್ಲಿ ಮುಖ್ಯವಾಗಿ ಆಲೋಚನೆ, ಭಾವನೆಗಳು ಮತ್ತು ಪಂಚೇಂದ್ರಿಯಗಳ ಮೂಲಕ ಪರಿಸರವನ್ನು ಅರ್ಥ ಮಾಡಿಕೊಳ್ಳುವ ಸಂವೇದನಾ ಕ್ರಿಯೆ ಏರುಪೇರಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಇದಕ್ಕೆ ಸೂಕ್ತ ಚಿಕಿತ್ಸೆ ಹಾಗೂ ಮಾರ್ಗದರ್ಶನ ಉಚಿತವಾಗಿ ಲಭ್ಯವಿದ್ದು, ಸದುಪಯೋಗಪಡಿಸಿಕೊಳ್ಳಿ. ಒಂದು ವಾರದ ಕಾಲ ಈ ಕಾಯಿಲೆ ಕುರಿತಂತೆ ಅರಿವು ಮೂಡಿಸುವ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ ಎಂದರು.

ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ನಗರದಲ್ಲಿ ಸ್ಕಿಜೋಪ್ರೀನಿಯಾ ಕಾಯಿಲೆಯ ಕುರಿತಂತೆ ಜಾಥಾ ನಡೆಸಿ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ, ತಾಲ್ಲೂಕಿನ ಎಲ್ಲಾ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು ಹಾಜರಿದ್ದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!