Home Sidlaghatta ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿ ಸ್ಮರಣೆ ಕಾರ್ಯಕ್ರಮ

ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿ ಸ್ಮರಣೆ ಕಾರ್ಯಕ್ರಮ

0
357
Sidlaghatta Shivakumara Swamiji Death Anniversary

Sidlaghatta : ಶ್ರೀ ಸಿದ್ಧಗಂಗಾಕ್ಷೇತ್ರದ ಡಾ.ಶ್ರೀ ಶಿವಕುಮಾರಮಹಾಸ್ವಾಮೀಜಿ (Sri Sri Dr.Shivakumara Swamiji) ಅವರ ಸಾಧನೆಗಳು ಧರ್ಮ, ಶಿಕ್ಷಣ, ಸಾಹಿತ್ಯ ಮತ್ತು ಸಂಸ್ಕೃತಿಗಳ ವಿಸ್ತಾರ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಧಾರ್ಮಿಕ ತತ್ವಗಳನ್ನು ನಿತ್ಯಜೀವನದಲ್ಲಿ ನಿಷ್ಟೆಯಿಂದ ಅನುಷ್ಟಾನಕ್ಕೆ ತಂದ ಪರಿಪೂರ್ಣಮೂರ್ತಿಯಾಗಿ ಅತಿಮಾನವರೆನಿಸಿಕೊಂಡಿದ್ದವರು. ಜನನಾಯಕ, ಕೃಷಿಕ, ಉದ್ಯಮಿ, ವೇದಾಂತಿ, ಅಧಿಕಾರಿಗಳೆಲ್ಲರಿಗೂ ಸೂಕ್ತ ಮಾರ್ಗದರ್ಶನ ಮಾಡಬಲ್ಲ ಅಸಾಧಾರಣ ಸಾಮರ್ಥ್ಯದ ವ್ಯಕ್ತಿತ್ವ ಶ್ರೀಗಳದ್ದಾಗಿತ್ತು ಎಂದು ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಸುಗಟೂರು ಗ್ರಾಮಸ್ಥರಿಂದ ಹಮ್ಮಿಕೊಂಡಿದ್ದ ಶಿವಕುಮಾರಮಹಾಸ್ವಾಮೀಜಿ ಸ್ಮರಣೆ, ದಾಸೋಹ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಧಿಕಾರದಾಹ, ಒಡ್ಡೋಲಗ, ಅಟ್ಟಹಾಸ, ಆಡಂಬರದ ಲಾಂಚನಗಳಿಗೆ ಮನಕೊಡದೇ ನಿರಪೇಕ್ಷ ಮತ್ತು ನಿಸ್ವಾರ್ಥವಾಗಿ ಸಮಾಜಸೇವೆಯನ್ನೇ ಗುರಿಯಾಗಿರಿಸಿಕೊಂಡಿರುವ ಶ್ರೀಗಳ ಜಾಗತಿಕ ಕೊಡುಗೆ ಅಪಾರವಾದುದು. ನಿಷ್ಟೆ, ಸೇವಾಕಾಂಕ್ಷೆ, ದೃಢನಿಶ್ಚಯ, ಒದಗಬಹುದಾದ ಅಡಚಣೆಗಳನ್ನು ಸಮರ್ಥವಾಗಿ ಎದುರಿಸಬಲ್ಲ ಧೈರ್ಯ, ಜೀವನ ಪಾವಿತ್ರತೆ, ವೈಶಾಲ್ಯ ಮನೋದೋರಣೆ, ಶುದ್ಧ ಅಂತಃಕರಣ, ಸತ್ಯಪ್ರೇಮ, ಕಾರುಣ್ಯ, ಎಲ್ಲಾ ಸದ್ಗುಣಗಳೂ ಮೈಗೂಡಿಕೊಂಡ ಸಾಕಾರಮೂರ್ತಿಯಾಗಿ ಶ್ರೀ ಶಿವಕುಮಾರಸ್ವಾಮೀಜಿ ನಡೆದಾಡುವ ದೇವರೆನಿಸಿಕೊಂಡಿದ್ದಾರೆ ಎಂದರು.

ಜೆ.ವೆಂಕಟಾಪುರ ಗ್ರಾಮಪಂಚಾಯತಿ ಅಧ್ಯಕ್ಷೆ ಶಾಂತಮ್ಮ ದೇವರಾಜು ಮಾತನಾಡಿ, ಸರ್ಕಾರದ ಸಹಾಯಹಸ್ತವನ್ನೇ ನಂಬಿಕೊಂಡು ಸೇವೆ ಮಾಡಲು ಪ್ರಯತ್ನಿಸಿದ್ದರೆ ಶ್ರೀ ಮಠ ಇಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ತನ್ನ ಸ್ವತಂತ್ರ ಸ್ವಂತದ್ದಾದ ಪರಿಶ್ರಮದಿಂದ ಕೋಟ್ಯಾಂತರ ಮಂದಿಯ ಪಾಲಿಗೆ ತ್ರಿವಿಧ ದಾಸೋಹಿಯಾಗಿ ಸಲ್ಲಿಸಿದ ಸೇವೆಯನ್ನು ಸಮಾಜವು ಪೂಜನೀಯ ರೀತಿಯಲ್ಲಿ ಸ್ಮರಿಸುತ್ತದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಜಗದೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀಗಳವರ ಜಯಂತಿಯನ್ನು ಸರ್ಕಾರಿ ಆಚರಣೆಯನ್ನಾಗಿ ಆಚರಿಸುವಂತಾಗಬೇಕು. ದಾಸೋಹ ದಿನಾಚರಣೆಯು ಅರ್ಥಪೂರ್ಣವಾಗಿ ಆಚರಿಸುವಂತಾಗಿ, ರಾಜ್ಯದ ಎಲ್ಲಾ ನಗರ, ಪಟ್ಟಣಗಳಲ್ಲಿ ಪ್ರಮುಖ ವೃತ್ತ, ರಸ್ತೆಗಳಿಗೆ ಶ್ರೀ ಅವರ ಹೆಸರು ನಾಮಕರಣ ಮಾಡಿ ಗೌರವ ಸೂಚಿಸಬೇಕು. ರಾಜ್ಯದ ಹೆಸರು ಜಾಗತಿಕ ಮಟ್ಟದಲ್ಲಿ ಪಸರಿಸಲು ಶ್ರೀ ಸಿದ್ಧಗಂಗಾ ಕ್ಷೇತ್ರದ ಕೊಡುಗೆ ಅಪಾರವಾದುದು ಎಂದರು.

ಗ್ರಾಮಪಂಚಾಯಿತಿ ಮಾಜಿ ಸದಸ್ಯ ಎನ್.ಅಶ್ವತ್ಥಪ್ಪ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಬುದ್ದಿವಂತ ಸುಶಿಕ್ಷಿತ ಯುವ ಮಾನವ ಸಂಪನ್ಮೂಲದ ಸೃಷ್ಟಿಯಲ್ಲಿ ಶ್ರೀ ಸಿದ್ಧಗಂಗಾಮಠದ ಕೊಡುಗೆ ಅಪಾರ ಎಂದರು.

ಶಿಕ್ಷಕ ಎ.ಬಿ.ನಾಗರಾಜ ಮಾತನಾಡಿ, ದೇಶದ ಅಭಿವೃದ್ಧಿಗೆ ಮಾನವಸಂಪನ್ಮೂಲದ ಬಳಕೆ ಅಗತ್ಯವಿದೆ. ಉಚಿತವಾಗಿ ಅಸನವಸನ ಮತ್ತು ಉತ್ತಮ ಶಿಕ್ಷಣ ನೀಡುವ ಮೂಲಕ ಬಡಮಕ್ಕಳಲ್ಲಿಯೂ ಅಡಗಿರಬಹುದಾದ ಅರಿವನ್ನು ಜಾಗೃತಗೊಳಿಸಿ ಸಮಾಜದ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಿದ ಕೀರ್ತಿ ಶ್ರೀಮಠಕ್ಕೆ ಸೇರಬೇಕು ಎಂದರು.

ವಿದ್ಯಾರ್ಥಿಗಳಿಗೆ ಲೇಖನಸಾಮಗ್ರಿಗಳನ್ನು ವಿತರಿಸಲಾಯಿತು. ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಎಸ್.ಎಂ.ಶಂಕರಪ್ಪ, ಸದಸ್ಯ ನಾರಾಯಣಸ್ವಾಮಿ, ಮಾಜಿ ಸದಸ್ಯ ಬಚ್ಚೇಗೌಡ, ಗ್ರಾಮಪಂಚಾಯಿತಿ ಸದಸ್ಯ ಎಂ.ನಾಗರಾಜು, ಹಿರಿಯರಾದ ದೊಡ್ಡಮುನಿವೆಂಕಟಶೆಟ್ರು, ಚನ್ನಬಸವರಾಜು, ಚಿಕ್ಕಬಸವರಾಜು, ಗಾಯಿತ್ರಮ್ಮ, ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕಿ ತಾಜೂನ್, ಶಿಕ್ಷಕ ಲಕ್ಷ್ಮಯ್ಯ ಹಾಜರಿದ್ದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!