![](https://www.sidlaghatta.com/wp-content/uploads/2022/03/22MarCb5.jpeg)
ಈ ಕ್ಷೇತ್ರದ ಶಾಸಕನಾಗಿ ಮತ್ತು ಸಚಿವನಾಗಿಯೂ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಅನುಭವ ಇದೆ. ಕ್ಷೇತ್ರದ ಜನತೆ ನನ್ನನ್ನು ಇದುವರೆಗೂ ಬೆಂಬಲಿಸಿಕೊಂಡು ಬಂದಿರುವಂತೆ ಮುಂದಿನ ಚುನಾವಣೆಯಲ್ಲೂ ಆಶೀರ್ವದಿಸಿ ಎಂದು ಶಾಸಕ ವಿ.ಮುನಿಯಪ್ಪ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿದರು.
ತಾಲ್ಲೂಕಿನ ಸೊಣ್ಣೇನಹಳ್ಳಿ ಗ್ರಾಮದಲ್ಲಿ ಶಾಸಕರ ನಿಧಿಯ 30 ಲಕ್ಷ ರೂ.ವೆಚ್ಚದಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಶಿಡ್ಲಘಟ್ಟ ವಿಧಾನಸಭೆಯ ಮುಂದಿನ ಅಭ್ಯರ್ಥಿ ನಾನೇ ಎಂದು ಕೆಪಿಸಿಸಿ ಆಧ್ಯಕ್ಷ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ. ಈ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಮೂಲಕ ಇಡೀ ರಾಜ್ಯದಲ್ಲಿ ಮಾದರಿ ಕ್ಷೇತ್ರ ಮಾಡಬೇಕೆಂಬ ಕನಸು ನನ್ನದಾಗಿದ್ದು, ಈ ನಿಟ್ಟಿನಲ್ಲಿ ನಾನು ನಿಮ್ಮೆಲ್ಲರ ಸಹಕಾರದಿಂದ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆಂದರು.
2023 ರಲ್ಲಿ ನಡೆಯುವ ಚುನಾವಣೆಯು ನನ್ನ ಕಡೆಯ ಚುನಾವಣೆಯಾಗಲಿದ್ದು, ಕ್ಷೇತ್ರದ ಎಲ್ಲ ಮತದಾರರು ನನಗೆ ಆಶೀರ್ವಾದ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ನನ್ನೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ರಾಜ್ಯದಲ್ಲಿ ಕೊರೊನಾ ಸೋಂಕಿನ ಕಾರಣದಿಂದಾಗಿ ಕ್ಷೇತ್ರದ ಅಭಿವೃದ್ಧಿಯ ಕಾಮಗಾರಿಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನವನ್ನು ಸರ್ಕಾರ ನೀಡಿಲ್ಲ. ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯದ ಕುರಿತು ವಿಧಾನಸಭೆಯ ಅವೇಶನದಲ್ಲಿ ಪ್ರಸ್ತಾಪಿಸಲಾಗಿದೆ ಎಂದರು.
ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್, ದೇವರಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಪೇಗೌಡ, ಕಾಂಗ್ರೆಸ್ ಯುವ ಮುಖಂಡ ನಿರಂಜನ್, ಗುತ್ತಿಗೆದಾರ ಲಕ್ಷ್ಮೀಪತಿ, ನರಸಿಂಹಣ್ಣ, ರಾಮಮೂರ್ತಿ, ಮುನಿರಾಜು, ದೇವರಾಜ್, ಪಿಳ್ಳಮುನಿಯಪ್ಪ, ಮೂರ್ತಿ, ಮಂಜುನಾಥ್, ಚನ್ನಕೃಷ್ಣಪ್ಪ ಹಾಜರಿದ್ದರು.