
Hittalahallii, Sidlaghatta : ಹೆಣ್ಣಾಗಿ ಹುಟ್ಟಿರುವುದಕ್ಕೆ ಯಾವುದೇ ಕಾರಣಕ್ಕೂ ಸಂಕೋಚ ಅಥವಾ ನಾಚಿಕೆ ಪಡುವುದು ಅಗತ್ಯವಿಲ್ಲ, ಬದಲಿಗೆ ಹೆಮ್ಮೆಪಡುವಂತಾಗಬೇಕು. ನಮ್ಮ ಕುಟುಂಬ ಮತ್ತು ಸಮಾಜವನ್ನು ಉತ್ತಮ ಮಾರ್ಗದಲ್ಲಿ ಕೊಂಡೊಯ್ದು, ಅಭಿವೃದ್ದಿ ಸಾಧಿಸುವಲ್ಲಿ ಮಹಿಳೆಯರ ಶ್ರಮ ಹಾಗೂ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದು ಜಿಲ್ಲಾ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹ ಕಾರ್ಯದರ್ಶಿ ಶಿಲ್ಪಾ ಹೇಳಿದರು.
ಶಿಡ್ಲಘಟ್ಟ–ಜಂಗಮಕೋಟೆ ಮಾರ್ಗದ ಹಿತ್ತಲಹಳ್ಳಿ ಗೇಟ್ ಬಳಿಯ ಇಂಡಿಯನ್ ಪ್ಯಾಲೇಸ್ನಲ್ಲಿ ಪೌಂಡೇಷನ್ ಫಾರ್ ಎಕಲಾಜಿಕಲ್ ಸೆಕ್ಯೂರಿಟಿ (ಎಫ್ಇಎಸ್) ಸಂಸ್ಥೆ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಸಮಾಜದಲ್ಲಿ ಪುರುಷರು ಮತ್ತು ಮಹಿಳೆಯರ ನಡುವೆ ಸಣ್ಣ ಪುಟ್ಟ ವ್ಯತ್ಯಾಸಗಳಿರುವುದಾದರೂ, ಸಂವಿಧಾನ ಇಬ್ಬರಿಗೂ ಸಮಾನ ಅವಕಾಶಗಳನ್ನು ನೀಡಿದೆ. ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉನ್ನತ ಮಟ್ಟಕ್ಕೆ ಬೆಳೆದು ನಿಲ್ಲಬೇಕು” ಎಂದು ಸಲಹೆ ನೀಡಿದರು.
ನಿಮ್ಮತನವನ್ನು ಉಳಿಸಿಕೊಂಡು ನಿಮ್ಮ ಕುಟುಂಬವನ್ನು ಬೆಳೆಸಿ, ನೀವೂ ಬೆಳೆಯಿರಿ. ಜೊತೆಗೆ ಇತರರಿಗೂ ಪ್ರೇರಣೆಯಾಗುವಂತೆ ಬದುಕಿ ಮಾದರಿಯಾಗಬೇಕೆಂದು ಅವರು ಕರೆ ನೀಡಿದರು. ಚಿಕ್ಕ ವಯಸ್ಸಿನ ಮದುವೆ, ಅಪರಿಪಕ್ವತೆಯಲ್ಲೇ ವಾಹನ ಚಾಲನೆ ಮುಂತಾದವು ಪೋಷಕರು ತಪ್ಪಿಸಬೇಕಾದ ಪ್ರಮುಖ ಸಂಗತಿಗಳಾಗಿವೆ ಎಂದು ಮನವರಿಕೆ ನೀಡಿದರು.
ಮಹಿಳೆಯರ ಸಾಧನೆ ಪ್ರತಿಬಿಂಬಿಸುವ ರಂಗೋಲಿ ಬಿಡಿಸಿ ಅಂಗನವಾಡಿ ಕಾರ್ಯಕರ್ತೆಯರು ಗಮನ ಸೆಳೆದರು. पंचायत ಸಂಪನ್ಮೂಲ ವ್ಯಕ್ತಿಗಳಾದ ಮಮತಾ ಮತ್ತು ಸರೋಜಮ್ಮ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು. ಎನ್.ಆರ್.ಎಲ್.ಎಂ ಸಂಘದ ಉತ್ಪನ್ನಗಳ ಮಾರಾಟ ಮಳಿಗೆ ತೆರೆಯಲಾಯಿತು.
ರಾಜ್ಯ ಸಂಪನ್ಮೂಲ ವ್ಯಕ್ತಿ ತ್ರಿಭುವನೇಶ್ವರಿ ಅವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಮಹತ್ವ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳು, ಅವುಗಳನ್ನು ಮೆಟ್ಟಿ ನಿಲ್ಲುವ ವಿಧಾನ, ಸಂವಿಧಾನದಲ್ಲಿ ಮಹಿಳೆಯರಿಗೆ ಲಭಿಸುವ ಹಕ್ಕುಗಳು ಹಾಗೂ ಅವಕಾಶಗಳ ಕುರಿತು ಉಪನ್ಯಾಸ ನೀಡಿದರು. ಬೇರು ಬೆವರು ಕಲಾ ತಂಡದ ಗೀತಗಾಯನ ಭಕ್ತಿಪೂರ್ಣ ವಾತಾವರಣ ಸೃಷ್ಟಿಸಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅಥಿಕ್ ಪಾಷಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನವತಾಜ್, ಸಹಾಯಕ ಶಿಶು ಅಭಿವೃದ್ದಿ ಅಧಿಕಾರಿ ಲಕ್ಷ್ಮಿದೇವಮ್ಮ, ಪಶುವೈದ್ಯಾಧಿಕಾರಿ ಶ್ರೀನಾಥ್ ರೆಡ್ಡಿ, ಎಫ್.ಇ.ಎಸ್ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕಿ ನಿಖತ್ ಪರ್ವೀನ್, ಎನ್.ಆರ್.ಎಲ್.ಎಂ ಸಂಘಗಳ ಒಕ್ಕೂಟದ ಅಧ್ಯಕ್ಷೆ ಅನುಸೂಯಮ್ಮ, ಸಂಯೋಜಕ ವಿಜಯ್ ಕುಮಾರ್, ಕುಂದಲಗುರ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾವತಿ, ಅಬ್ಲೂಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗವೇಣಿ, ನಾಗಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ, ಜಿಲ್ಲಾ ಸಂಯೋಜಕ ಶಶಿಧರ್ ಹಾಜರಿದ್ದರು.