Doddatekahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (SKDRDP) ವತಿಯಿಂದ ಹಮ್ಮಿಕೊಂಡಿದ್ದ ವಾತ್ಸಲ್ಯ ಮನೆ (Vatsalya House) ಹಸ್ತಾಂತರ ಕಾರ್ಯಕ್ರಮದಲ್ಲಿ ಗ್ರಾಮದ ನಾರಾಯಣಮ್ಮ ಎಂಬುವವರಿಗೆ ಮನೆ ಹಸ್ತಾಂತರಿಸಿ ಸಂಸ್ಥೆಯ ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಎಂ.ಶೀನಪ್ಪ ಅವರು ಮಾತನಾಡಿದರು.
ರಾಜ್ಯದ ಸುಮಾರು 12 ಸಾವಿರ ಮಂದಿ ಅತ್ಯಂತ ಕಡುಬಡವ ವೃದ್ಧ ಕುಟುಂಬಗಳನ್ನು ಗುರುತಿಸಿ ಜೀವನ ನಿರ್ವಹಣೆಗೆ ಪ್ರತಿ ತಿಂಗಳು 750 ರಿಂದ 3000 ಮೊತ್ತವನ್ನು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನೀಡುತ್ತಿದ್ದು ವರ್ಷಕ್ಕೆ ಸುಮಾರು 10 ಕೋಟಿ ದುರ್ಬಲ ವರ್ಗದ ಜನರ ಹಸಿವನ್ನು ನೀಗಿಸಲು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ನೆರವಾಗುತ್ತಿದೆ ಎಂದು ತಿಳಿಸಿದರು.
ಬಹಳಷ್ಟು ಮಂದಿಗೆ ಸರಿಯಾದ ಮನೆಗಳಿಲ್ಲದೇ ಕುಸಿದು ಬಿದ್ದಿರುವ ಗುಡಿಸಲಿನಲ್ಲಿ ಭಯದಿಂದ ಬದುಕುವುದನ್ನು ಮನಗಂಡ ಮಾತೃಶ್ರೀ ಹೇಮಾವತಿ ಅಮ್ಮನವರು ಅಂತಹ ದುಸ್ಥಿತಿಯಲ್ಲಿರುವ ನಿಜವಾದ ಫಲಾನುಭವಿಯನ್ನು ಗುರುತಿಸಿ ಈ ವರ್ಷ ಒಂದು ಸಾವಿರ ವಾತ್ಸಲ್ಯ ಮನೆಯನ್ನು ಕಟ್ಟಿಕೊಡುವ ಯೋಜನೆಯನ್ನು ಹಾಕಿಕೊಂಡಿದ್ದು, ಈ ದಿನ ಧರ್ಮಸ್ಥಳ ಸಂಸ್ಥೆಯ ಜೊತೆಗೆ ಈ ಭಾಗದ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ನಿರ್ಮಾಣವಾಗಿರುವ ವಾತ್ಸಲ್ಯ ಮನೆ ಹಸ್ತಾಂತರಿಸಲಾಗಿದೆ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಗೋಪಾಲರೆಡ್ಡಿ ಮಾತನಾಡಿ, ಧರ್ಮಸ್ಥಳ ಸಂಸ್ಥೆಯ ಹಲವಾರು ಕಾರ್ಯಕ್ರಮಗಳು ಇವತ್ತು ಬಡವರ ಕಣ್ಣೀರನ್ನು ಒರೆಸುತ್ತಿವೆ. ಅತ್ಯಂತ ಪಾರದರ್ಶಕವಾಗಿ ಜನಸಾಮಾನ್ಯರಿಗೆ ಪ್ರಯೋಜನವಾಗುವ ಕಾರ್ಯಕ್ರಮಗಳನ್ನು ಪೂಜ್ಯರ ಮಾರ್ಗದರ್ಶನದಲ್ಲಿ ನಡೆಸುತ್ತಿರುವ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕ ಪ್ರಶಾಂತ್.ಸಿ.ಎಸ್, ಯೋಜನಾಧಿಕಾರಿ ಪ್ರಕಾಶ್ಕುಮಾರ್, ಗ್ರಾಮ ಪಂಚಾಯತಿ ಸದಸ್ಯರಾದ ಮಂಜುನಾಥ್, ಅಶ್ವತ್ಥಮ್ಮ, ಪೂಜಪ್ಪ, ಪ್ರಾದೇಶಿಕ ವಿಭಾಗದ ಜೆ.ವಿ.ಕೆ ಸಮನ್ವಯಾಧಿಕಾರಿ ದೀಪಾ, ತಾಲ್ಲೂಕು ಸಮನ್ವಯಾಧಿಕಾರಿ ಸುಮಂಗಲಾ, ಮೇಲ್ವಿಚಾರಕರಾದ ನಾಗರಾಜ್, ಸೇವಾಪ್ರತಿನಿಧಿ ಶಶಿಕಲಾ.ಕೆ.ಎಂ, ಶಶಿಕಲಾ.ಡಿ, ಲಕ್ಷ್ಮಿದೇವಿ, ಮುನಿಲಕ್ಷ್ಮಿ ಹಾಜರಿದ್ದರು.