Bagepalli : ಬಾಗೇಪಲ್ಲಿ ಪಟ್ಟಣದ ಬಾಲಕಿಯರ ಸರ್ಕಾರಿ ಶಾಲಾವರಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ, ಸಾರ್ವಜನಿಕರ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮತದಾರರ ಸಾಕ್ಷರತಾ ಸಂಘಟನೆಗಳ ವಿವಿಧ ಚಟುವಟಿಕೆಗಳನ್ನು ತಹಶೀಲ್ದಾರ್ ಡಿ.ಎ.ದಿವಾಕರ್ ಉದ್ಘಾಟಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಹಶೀಲ್ದಾರರು ” ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಜೊತೆಯಲ್ಲಿ ಸಾಮಾಜಿಕ ಪ್ರಜ್ಞೆ ಹೊಂದುವುದು ಅಗತ್ಯವಾಗಿದೆ. ಮತದಾನದ ಪಾವಿತ್ರ್ಯತೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಪ್ರಜಾಪ್ರಭುತ್ವದ ವ್ಯವಸ್ಥೆಯ ಸಂವಿಧಾನ 18 ವರ್ಷಗಳ ನಂತರದ ಪ್ರಜೆಗಳಿಗೆ ಮತದಾನದ ಹಕ್ಕು ನೀಡಿದೆ. ಮತದಾನ ಮಾಡುವ ಮೂಲಕ ಸರ್ಕಾರಗಳನ್ನು ರಚನೆ ಮಾಡುವ ಅವಕಾಶಗಳು ಇರುವುದರಿಂದ ಮತದಾನದ ಜಾಗೃತಿ ಮತ್ತು ಮಹತ್ವವನ್ನು ವಿದ್ಯಾರ್ಥಿ ದೆಸೆಯಿಂದಲೇ ಕಲಿಸಲು ಶಾಲಾ-ಕಾಲೇಜುಗಳಲ್ಲಿ ಯುವಸಂಸತ್ತು ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಮತದಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಹಾಗೂ ರಾಜ್ಯ ಮಟ್ಟದ ರಸಪ್ರಶ್ನೆಗಳ ಸ್ಪರ್ಧೆಗಳನ್ನು ಹಮ್ಮಿಕೊಂಡ್ಡಿದ್ದು ವಿದ್ಯಾರ್ಥಿಗಳು ಭಾಗವಹಿಸಬೇಕು ” ಎಂದು ಹೇಳಿದರು.
ಶಾಲಾ-ಕಾಲೇಜುಗಳಲ್ಲಿ ವಿಧಾನಸಭೆ, ಲೋಕಸಭೆಯಲ್ಲಿ ನಡೆಯುವ ಅಧಿವೇಶನಗಳ ಮಾದರಿಯಲ್ಲಿ ಯುವಸಂಸತ್ತು ಕಾರ್ಯಕ್ರಮ ನಡೆಸಲಾಗುತ್ತದೆ. ಮತದಾನದ ಬಗ್ಗೆ ಅರಿವು ಮೂಡಿಸಲು ಕ್ವಿಜ್ ಸ್ಪರ್ಧೆಗಳನ್ನು ಮಾಡಲಾಗಿದ್ದು, ಗೆದ್ದವರಿಗೆ ಬಹುಮಾನ, ನಗದು ಪುರಸ್ಕಾರ ನೀಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿದ್ದಪ್ಪ ತಿಳಿಸಿದರು.
ಬಾಲಕಿಯರ ಶಾಲಾವರಣದ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಪ್ರಬಂಧ ಹಾಗೂ ಭಿತ್ತಿಪತ್ರಗಳ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕ್ಷೇತ್ರ ಸಂಪನ್ಮೂಲ ತಾಲ್ಲೂಕು ಸಮನ್ವಾಧಿಕಾರಿ ವೆಂಕಟರಾಮಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಎನ್.ಮಂಜುನಾಥಸ್ವಾಮಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಆರ್.ಹನುಮಂತರೆಡ್ಡಿ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಮೀರ್ ಜಾನ್, ಉಪನ್ಯಾಸಕ ವೆಂಕಟರಾಮರೆಡ್ಡಿ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಫಕ್ರುದ್ದೀನ್, ಶಿಕ್ಷಣ ಅಧಿಕಾರಿಗಳಾದ ರಾಜಣ್ಣ, ಬಾಲರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವೆಂಕಟರವಣಪ್ಪ, ಉಪನ್ಯಾಸಕಿ ಡಾ.ಶಾರದ, ತಾಲ್ಲೂಕು ಸಾಕ್ಷರತಾ ಅಧಿಕಾರಿ ಆರ್.ಶಿವಪ್ಪ ಕಾರ್ಯಕರಮದಲ್ಲಿ ಪಾಲ್ಗೊಂಡಿದ್ದರು.