Chikkaballapur : ಮಹಾಶಿವರಾತ್ರಿ (Mahashivaratri) ಪ್ರಯುಕ್ತ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ವಿವಿದೆಡೆ ಜಾತ್ರೆ (Jathre) ಹಾಗೂ ರಥೋತ್ಸವಗಳು (Rathotsava) ವಿಜೃಂಭಣೆಯಿಂದ ನಡೆಯಿತು. ಈ ಭಾರಿ ಕರೋನ ನಿರ್ಬಂಧನೆಗಳಿಲ್ಲದರಿಂದ ಅಪಾರ ಭಕ್ತಾಧಿಗಳು ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಚಿಕ್ಕಬಳ್ಳಾಪುರ – Chikkaballapur
![Chikkaballapur Bhoga Nandishwara Yoga Nandishwara Jodi Rathotsava](https://chikkaballapur.com/wp-content/uploads/2022/03/Chikaballapur03Mar-1024x576.jpeg)
ಚಿಕ್ಕಬಳ್ಳಾಪುರ ತಾಲ್ಲೂಕಿನ ಐತಿಹಾಸಿಕ ಭೋಗ ನಂದೀಶ್ವರ ಮತ್ತು ಯೋಗ ನಂದೀಶ್ವರ ಜೋಡಿ ರಥೋತ್ಸವ ವಿಜೃಂಭಣೆಯಿಂದ ಬುಧವಾರ ದೇವಾಲಯದ ಆವರಣದಲ್ಲಿ ನಡೆಯಿತು. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್ ಮಧ್ಯಾಹ್ನ 12.30ರ ಸುಮಾರಿಗೆ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಕೇಸರಿ ಧ್ವಜ, ಹೂವುಗಳಿಂದ ಶೃಂಗಾರ ಗೊಂಡ ರಥಗಳಲ್ಲಿ ಯೋಗ ನಂದೀಶ್ವರ, ಭೋಗನಂದೀಶ್ವರಸ್ವಾಮಿ, ಗಿರಿಜಾಂಬ, ಅಂಬಿಕಾ ಮತ್ತು ಗಣಪತಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ದೇವಸ್ಥಾನದ ಸುತ್ತ ರಥಗಳನ್ನು ಭಕ್ತರು ಎಳೆದು ಬಾಳೆ ಹಣ್ಣು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು.
ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಮುನೇಗೌಡ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಶಂಕರ್ ಹಾಗೂ ಗಣ್ಯರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಶಿಡ್ಲಘಟ್ಟ – Sidlaghatta
![Sidlaghatta Gudihalli Shree Parvatamba Shree Someshwara Swamy Temple Brahma Rathotsava](https://chikkaballapur.com/wp-content/uploads/2022/03/03MarKa03-1024x683.jpeg)
ಶಿಡ್ಲಘಟ್ಟ ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡಿಹಳ್ಳಿ ಗ್ರಾಮದ ಪಾರ್ವತಾಂಬ ಸಮೇತ ಶ್ರೀ ಸೋಮೇಶ್ವರಸ್ವಾಮಿ ದೇವಾಲಯದ 14 ನೇ ವರ್ಷದ ಬ್ರಹ್ಮ ರಥೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಸಿಂಗರಿಸಿ ವಿಶೇಷ ಪೂಜೆ, ಹೋಮ, ಹವನ, ಕಳಶ ಪೂಜೆ, ಗಣಪತಿ ಪೂಜೆ ನಡೆಸಿ ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಗೌರಿಬಿದನೂರು – Gauribidanur
![Gauribidanur Kudumalakunte Shree Malleshwara Swamy Rathotsava](https://chikkaballapur.com/wp-content/uploads/2022/03/Gauribidanur-03-Mar-1024x576.jpeg)
ಶಿವರಾತ್ರಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಗೌರಿಬಿದನೂರು ತಾಲ್ಲೂಕಿನ ಕುಡುಮಲಕುಂಟೆ ಗ್ರಾಮದಲ್ಲಿನ ಶ್ರೀ ಮಲ್ಲೇಶ್ವರ ಸ್ವಾಮಿ ರಥೋತ್ಸವಕ್ಕೆ ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ಚಾಲನೆ ನೀಡಿದರು.
ಮುಖಂಡರಾದ ರಾಮಕೃಷ್ಣಪ್ಪ, ಅಶ್ವತ್ಥಪ್ಪ, ಮೂರ್ತಿ, ನಾರಾಯಣಪ್ಪ, ಕಾರ್ತಿಕ್, ಸಂಪತ್, ಗಂಗಾಧರ್, ಮಲ್ಲಿಕಾರ್ಜುನ್, ವೆಂಕಟರವಣ, ಹನುಮಂತ ರೆಡ್ಡಿ ಪ್ರಕಾಶರೆಡ್ಡಿ ಭಾಗವಹಿಸಿದ್ದರು.
ಬಾಗೇಪಲ್ಲಿ – Bagepalli
![Bagepalli Chitravati River Aarti](https://chikkaballapur.com/wp-content/uploads/2022/03/Bagepalli-03Mar-1024x576.jpeg)
ಬಾಗೇಪಲ್ಲಿ ಹೊರವಲಯದ ಜಡಲಭೈರವೇಶ್ವರ ದೇವಾಲಯದ ಮುಂಭಾಗದ ಚಿತ್ರಾವತಿ ನದಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಹಾಶಿವರಾತ್ರಿಯ ಪ್ರಯುಕ್ತ ನಮಾಮಿ ದೀಪಾರತಿ ಬೆಳಗಿಸಿದರು.
ಗಡಿದಂನ ಹಾಗೂ ದೇವಾಲಯಗಳ ಅರ್ಚಕರು, ವೇದಮಂತ್ರಗಳನ್ನು ಪಠಿಸುತ್ತ ದೇವಾಲಯದಿಂದ ಚಿತ್ರಾವತಿ ನದಿಯವರಿಗೂ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಚಿತ್ರಾವತಿ ನದಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅರಿಶಿಣ, ಕುಂಕುಮ, ಹೂವು ಸಮರ್ಪಿಸಿ ಪೂಜೆ ಮಾಡಿ, ದೀಪಾರತಿ ಬೆಳಗಿಸಿರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಕೆ.ಎಂ. ನಯಾಜ್ ಅಹಮದ್, ಪುರಸಭೆ ಉಪಾಧ್ಯಕ್ಷ ಎ.ಶ್ರೀನಿವಾಸ್, ಮುಖಂಡ ಅಮರನಾಥರೆಡ್ಡಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಆರ್.ಹನುಮಂತರೆಡ್ಡಿ, ಸತ್ಯಸಾಯಿ ಧರ್ಮಶಾಲಾ ಟ್ರಸ್ಟ್ ಅಧ್ಯಕ್ಷ ಕೆ.ಎಂ.ನಾಗರಾಜು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ, ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎನ್.ನಾಗರಾಜ್, ಮುಜರಾಯಿ ವಿಭಾಗದ ಅಧಿಕಾರಿ ಉಷಾರಾಣಿ, ಗ್ರಾಮಲೆಕ್ಕಿಗ ಅಜಯ್ ಕುಮಾರ್, ಜಡಲಭೈರವೇಶ್ವರ ದೇವಾಲಯದ ಅರ್ಚಕ ಶಿವಶಂಕರಪ್ಪ, ಮಲ್ಲಸಂದ್ರಅಶ್ವಥ್ಥಪ್ಪ ಉಪಸ್ಥಿತರಿದ್ದರು.
ಚಿಂತಾಮಣಿ
![Chintamani Kaiwara Bheemalingeshwara Swamy Rathotsava](https://chikkaballapur.com/wp-content/uploads/2022/03/Chintamani-03Mar-1024x576.jpeg)
ಚಿಂತಾಮಣಿಯ ಪುರಾಣ ಪ್ರಸಿದ್ಧ ಕೈವಾರದ ಭೀಮಲಿಂಗೇಶ್ವರ ಸ್ವಾಮಿಯ ಮುತ್ತಿನ ಪಲ್ಲಕ್ಕಿ ಉತ್ಸವವನ್ನು ನಡೆಸಲಾಯಿತು. ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದ ಪಲ್ಲಕ್ಕಿಯಲ್ಲಿ ಭೀಮಲಿಂಗೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆಗಳನ್ನು ನಡೆಸಲಾಯಿತು.
ಶಿವರಾತ್ರಿಯ ಜಾಗರಣೆ ಪ್ರಯುಕ್ತ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ರವರಿಂದ ಹರಿಕಥೆಯನ್ನು ಮಠದ ಆವರಣದಲ್ಲಿ ಆಯೋಜಿಸಲಾಗಿತ್ತು.