17.5 C
Bengaluru
Friday, February 6, 2026

ಫೆಬ್ರವರಿ ಬಜೆಟ್‌ವರೆಗೆ ಗಡುವು; ಸಂಸದರ ಮನೆ ಮುಂದೆ ಪ್ರತಿಭಟನೆ ಎಚ್ಚರಿಕೆ

- Advertisement -
- Advertisement -

Chikkaballapur : ಸಮಾನ ಕೆಲಸಕ್ಕೆ ಸಮಾನ ವೇತನ, ನೌಕರಿ ಖಾಯಂ ಹಾಗೂ ಹೆಚ್ಚುವರಿ ಅನುದಾನಕ್ಕಾಗಿ ಹಲವಾರು ದಶಕಗಳಿಂದ ಶ್ರಮಿಸುತ್ತಿರುವ ರಾಜ್ಯದ ಅಂಗನವಾಡಿ, ಅಕ್ಷರ ದಾಸೋಹ (ಬಿಸಿಯೂಟ) ಮತ್ತು ಆಶಾ ಯೋಜನೆಗಳ ಮಹಿಳಾ ಕಾರ್ಯಕರ್ತೆಯರು ಸರ್ಕಾರಕ್ಕೆ ಅಂತಿಮ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಲಕ್ಷ್ಮಿದೇವಮ್ಮ ಅವರು ಮಾತನಾಡಿ, “ನಮ್ಮ ಅನಿರ್ದಿಷ್ಟಾವಧಿ ಹೋರಾಟವನ್ನು ಸದ್ಯಕ್ಕೆ ಫೆಬ್ರವರಿ ಬಜೆಟ್‌ವರೆಗೆ ಮುಂದೂಡಿದ್ದೇವೆ. ಬಜೆಟ್ಟಿನಲ್ಲಿ ನಮ್ಮ ಬೇಡಿಕೆಗಳು ಈಡೇರದೆ ಹೋದಲ್ಲಿ, ನಾವು ರಾಜ್ಯದ ಸಂಸದರ ಮನೆ ಮುಂದೆ ಪ್ರತಿಭಟನೆ ಮಾಡುವ ಮೂಲಕ ಮತ್ತೆ ಹೋರಾಟವನ್ನು ತೀವ್ರಗೊಳಿಸುತ್ತೇವೆ” ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.

ವೇತನದ ತಾರತಮ್ಯ ಮತ್ತು ಅನುದಾನ ಕಡಿತ

ಆರೋಗ್ಯ, ಶಿಕ್ಷಣ ಮತ್ತು ಆಹಾರ ಉದ್ದೇಶಗಳಿಗಾಗಿ ಆರಂಭಿಸಿದ ಈ ಯೋಜನೆಗಳಲ್ಲಿ ದೇಶಾದ್ಯಂತ ಸುಮಾರು 64 ಲಕ್ಷ ಮಹಿಳೆಯರು ತೊಡಗಿಸಿಕೊಂಡಿದ್ದಾರೆ.

ಈ ಮಹಿಳೆಯರು ದೀರ್ಘಕಾಲದಿಂದ ದುಡಿಯುತ್ತಿದ್ದರೂ ಅವರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ. ಶೇ. 60ರಷ್ಟು ಮಾತ್ರ ಅನುದಾನ: ಈ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಂತ ಹಂತವಾಗಿ ಅನುದಾನ ಕಡಿತ ಮಾಡುತ್ತಾ ಬಂದಿದ್ದು, ಈಗ ಕೇವಲ ಶೇ 60ರಷ್ಟು ಅನುದಾನ ಮಾತ್ರ ನೀಡಲಾಗುತ್ತಿದೆ.

ಅನುದಾನ ಕಡಿತದಿಂದಾಗಿ ಅಂಗನವಾಡಿ ಹಾಗೂ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಇದು ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಲಕ್ಷ್ಮಿದೇವಮ್ಮ ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸಚಿವರ ಮಧ್ಯಸ್ಥಿಕೆ ಮತ್ತು ಭರವಸೆ

ನೌಕರರ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲಾಧಿಕಾರಿಗಳ ಮೂಲಕ ಮಧ್ಯ ಪ್ರವೇಶಿಸಿ, ಚಳವಳಿಗಾರರೊಂದಿಗೆ ಮಾತುಕತೆ ನಡೆಸಿ, ಕೇಂದ್ರ ಸರ್ಕಾರದಲ್ಲಿ ಚರ್ಚಿಸುವ ಭರವಸೆ ನೀಡಿದ್ದರಿಂದ ಹೋರಾಟವನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಯಿತು.

ಡಿಸೆಂಬರ್ 3ರಂದು ಕುಮಾರಸ್ವಾಮಿ ಸಮ್ಮುಖದಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣದೇವಿ ಮತ್ತು ಇತರ ಉನ್ನತ ಅಧಿಕಾರಿಗಳೊಂದಿಗೆ ಜಂಟಿ ಸಭೆಗಳು ನಡೆದವು.

ಸಭೆಯಲ್ಲಿ ನೀಡಿದ ಪ್ರಮುಖ ಭರವಸೆಗಳು:

ಅಂಗನವಾಡಿ ನೌಕರರಿಗೆ: ವೇತನ ಹೆಚ್ಚಳ, ನಿರಂತರ ತರಬೇತಿ ಕಡಿತ, ಫಲಾನುಭವಿಗಳ ಘಟಕ ವೆಚ್ಚ ಹೆಚ್ಚಳ, ಗ್ರ್ಯಾಚುಟಿಯಲ್ಲಿ ಕೇಂದ್ರ ಸರ್ಕಾರದ ಪಾಲು ನೀಡುವುದು ಮತ್ತು ಚುನಾವಣಾ ಕೆಲಸಗಳಿಂದ ಕೈಬಿಡುವುದು.

ಬಿಸಿಯೂಟ ನೌಕರರಿಗೆ: 2009ರಿಂದ ವೇತನ ಹೆಚ್ಚಿಸದಿರುವ ಬಗ್ಗೆ ಮತ್ತು ಕೆಲಸದ ಅವಧಿಯನ್ನು 4 ರಿಂದ 6.5 ಗಂಟೆಗೆ ಹೆಚ್ಚಿಸಿರುವ ಬಗ್ಗೆ ಚರ್ಚೆ. 12 ತಿಂಗಳ ನಿರಂತರ ಸಂಬಳ ಪಾವತಿಸಲು ಮತ್ತು ಎನ್.ಜಿ.ಒ ಗಳಿಗೆ ಯೋಜನೆಯನ್ನು ನೀಡದಂತೆ ಚರ್ಚೆ.

ಆಶಾ ಕಾರ್ಯಕರ್ತೆಯರಿಗೆ: ಪ್ರೋತ್ಸಾಹಧನದ (Incentive) ಬದಲಾಗಿ ವೇತನ (Salary) ನೀಡುವ ಬಗ್ಗೆ ಚರ್ಚೆ.

ರಾಜ್ಯ ಸಂಸದರಿಗೆ ಮನವಿ

ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ವಿ. ಸೋಮಣ್ಣ ಮತ್ತು ಶೋಭಾ ಕರಂದ್ಲಾಜೆ ಅವರು ಮುತುವರ್ಜಿವಹಿಸಿ ಕೇಂದ್ರದ ಮೇಲೆ ಒತ್ತಡ ಹೇರಿ, ಲೋಕಸಭೆಯಲ್ಲಿ ಧ್ವನಿ ಎತ್ತಬೇಕು ಎಂದು ನೌಕರರು ಮನವಿ ಮಾಡಿದ್ದಾರೆ. ಫೆಬ್ರವರಿ ಬಜೆಟ್‌ನಲ್ಲಿ ಬೇಡಿಕೆಗಳು ಈಡೇರದಿದ್ದರೆ, ಹೋರಾಟ ಮತ್ತಷ್ಟು ವ್ಯಾಪಕಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!