Gauribidanur : ಗೌರಿಬಿದನೂರು ತಾಲ್ಲೂಕಿನ ಹಂಪಸಂದ್ರ (Hampasandra) ಗ್ರಾಮದಲ್ಲಿ ಅಂಬೇಡ್ಕರ್ ಮತ್ತು ವಾಲ್ಮೀಕಿ ಪ್ರತಿಮೆ ಸ್ಥಾಪನೆಯ ವಿಚಾರ ಸಂಘರ್ಷಕ್ಕೆ (Ambedkar Valmiki Statue Issue) ರೂಪಾಂತರಗೊಂಡಿದ್ದು ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ ಅಧಿಕಾರಿಗಳು ಗ್ರಾಮದಲ್ಲಿ ನಿಷೇಧಾಜ್ಞೆ (Section 144) ಜಾರಿ ಮಾಡಿದ್ದಾರೆ.
ಶನಿವಾರ ರಾತ್ರಿ ಗ್ರಾಮದ ಸಿದ್ದಗಂಗಮ್ಮ ಎಂಬುವರು ಶನಿಮಹಾತ್ಮ ದೇವಾಲಯಕ್ಕಾಗಿ ದಾನ ಮಾಡಿದ ನಿವೇಶನದಲ್ಲಿ ಪರಿಶಿಷ್ಟ ಜಾತಿಯವರಿಂದ ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪನೆಯಾದ ನಂತರ, ಭಾನುವಾರ ವಾಲ್ಮೀಕಿ ಸಮುದಾಯದವರು ಮಹರ್ಷಿ ವಾಲ್ಮೀಕಿಯ ಭಾವಚಿತ್ರದ ನಾಮಫಲಕವನ್ನು ಸ್ಥಾಪಿಸಿದ ಹಿನ್ನೆಲೆಯಲ್ಲಿ ಎರಡು ಸಮುದಾಯಗಳ ನಡುವೆ ಮಾತಿನ ಚಕಮಕಿ ಉಂಟಾಗಿ, ಕೊನೆಗೆ ಪರಸ್ಪರ ಕಲ್ಲು ತೂರಾಟವೂ ನಡೆದಿದೆ.
ಘಟನೆ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ತಹಶೀಲ್ದಾರ್ ಮಹೇಶ್ ಪತ್ರಿ, ಡಿವೈಎಸ್ಪಿ ಶಿವಕುಮಾರ್ ಹಾಗೂ ಇತರ ಅಧಿಕಾರಿಗಳು ಗ್ರಾಮಕ್ಕೆ ಧಾವಿಸಿ ಶಾಂತಿ ಸಭೆ ನಡೆಸಿದರು. ಆದರೆ ಶಾಂತಿ ಸಭೆ ವಿಫಲವಾಗಿ, ಪರಿಸ್ಥಿತಿಯನ್ನು ಹತೋಟಿಗೆ ತರುವ ಸಲುವಾಗಿ ಕೆಎಸ್ಆರ್ಪಿ ಪಡೆ ಸೇರಿದಂತೆ 150 ಕ್ಕೂ ಹೆಚ್ಚು ಪೊಲೀಸರನ್ನು ಗ್ರಾಮದೊಳಗೆ ನಿಯೋಜಿಸಲಾಗಿದೆ.