Gudibande : ಚಿಕ್ಕಬಳ್ಳಾಪುರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಯುವಸ್ಪಂದನಾ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಗುಡಿಬಂಡೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (Pre University college) (PUC) ಜೀವನ ಕೌಶಲ ಮತ್ತು ತರಬೇತಿ ಕಾರ್ಯಾಗಾರ (Life Skills and Training Workshop) ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕೌಶಲ ತರಬೇತುದಾರ ದಿಗೂರು ಎ.ರಾಘವೇಂದ್ರ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಅರಿವು, ಭಾವನೆ, ನಿರ್ವಹಣೆ, ಸಹಾನುಭೂತಿ, ಒತ್ತಡ ನಿರ್ವಹಣೆ, ಪರಿಣಾಮಕಾರಿ ಸಂವಹನ, ಸೃಜನಾತ್ಮಕ ಚಿಂತನೆ, ಸಮಸ್ಯೆಗಳ ಪರಿಹಾರ, ವಿಮರ್ಶಾತ್ಮಕ ಚಿಂತನೆ ಮುಂತಾದವುಗಳನ್ನು ಚಟುವಟಿಕೆಗಳ ಮೂಲಕ ಅರಿವು ಮೂಡಿಸಿ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳು ಹಾಗೂ ಅವು ಜೀವನದ ಮೇಲೆ ಬೀರುವ ಪ್ರಭಾವ ಹಾಗೂ ಉಂಟುಮಾಡುವ ಪರಿಣಾಮಗಳು ಸಕಾರಾತ್ಮಕವಾಗಿ ಅಭ್ಯಸಿಸುವ ಹವ್ಯಾಸ, ಮಾನಸಿಕವಾಗಿ ದೃಢವಾಗಿರಲು ಅನುಸರಿಸಬೇಕಾದ ಸಕಾರಾತ್ಮಕ ನಿಲುವು, ಉತ್ತಮ ಸಂವಹನ ಕೌಶಲ, ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳುವುದು, ಗುರಿ ಸಾಧನೆಗೆ ಅಳವಡಿಸಬೇಕಾದ ಕ್ರಮ, ಕಡಿಮೆ ಆದಾಯದಲ್ಲಿ ಉಳಿತಾಯ ಮಾಡುವ ರೀತಿ, ಸಾಮಾಜಿಕ ಸಂಬಂಧಗಳನ್ನು ಬೆಳೆಸುವುದು ಮುಂತಾದ ವಿಷಯಗಳನ್ನು ಗುಂಪು ಚರ್ಚೆ ಮೂಲಕ ಪರಿಚಯಿಸಿದರು.
ಕಾರ್ಯಾಗಾರದಲ್ಲಿ ಕಾಲೇಜಿನ ಪ್ರಾಂಶುಪಾಲ ಎ.ರವೀಂದ್ರ, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಕೃಷ್ಣಪ್ಪ, ಪಿಯು ಕಾಲೇಜಿನ ಹಿರಿಯ ಉಪನ್ಯಾಸಕ ಆರ್.ಜಿ. ಸೋಮಶೇಖರ್, ವರದರಾಜನ್, ಬಿ.ಜೆ.ರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.