Chikkaballapur : ಗುರುವಾರ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ವಾಯುಪುತ್ರನ ಭಕ್ತರು ಶ್ರದ್ಧಾ ಭಕ್ತಿಯಿಂದ ಅನೇಕ ಆಂಜನೇಯ ದೇವಾಲಯಗಳಲ್ಲಿ ಹನುಮ ಜಯಂತಿಯನ್ನು ಆಚರಿಸಿದರು. ಚಿಕ್ಕಬಳ್ಳಾಪುರ ನಗರ ಹೊರವಲಯದ ಆದಿಚುಂಚನಗಿರಿ ಶಾಖಾ ಮಠದ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಆಂಜನೇಯಸ್ವಾಮೀಗೆ ಅಭಿಷೇಕ ಪೂಜೆ ನೆರವೇರಿಸಿ ದೇವಾಲಯಕ್ಕೆ ವಿವಿಧ ಹೂವುಗಳಿಂದ ವಿಶೇಷ ಅಲಂಕಾರ ಮಾಡಿ ಅದ್ಧೂರಿಯಾಗಿ ಹನುಮ ಜಯಂತಿಯನ್ನು ಆಚರಿಸಲಾಯಿತು.
ಬೆಳಿಗ್ಗೆಯಿಂದಲೇ ಹನುಮ ಭಕ್ತರು ಚಿಕ್ಕಬಳ್ಳಾಪುರ ನಗರದಲ್ಲಿರುವ ಎಚ್.ಎಸ್.ಗಾರ್ಡನ್ ಬಡಾವಣೆಯ ಅಭಯ ಆಂಜನೇಯಸ್ವಾಮಿ ದೇವಾಲಯ, ಗಂಗಮ್ಮನ ಗುಡಿ ಬೀದಿಯಲ್ಲಿರುವ ಪೇಟೆ ಆಂಜನೇಯಸ್ವಾಮಿ ದೇವಾಲಯ, ಹಳೇ ಪೊಲೀಸ್ ಠಾಣೆ ರಸ್ತೆಯ ಜೀವಾಂಜನೇಯ ಸ್ವಾಮಿ, ಇಂದಿರಾ ನಗರದ ಅಭಯ ಆಂಜನೇಯಸ್ವಾಮಿ, ಹಳೇ ಜಿಲ್ಲಾಸ್ಪತ್ರೆಯ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಅನೇಕ ಮಾರುತಿ ಮಂದಿರಗಳಲ್ಲಿ ವಿಶೇಷ ಪೂಜೆ ನರೆವೇರಿಸಿದರು.
ಚಿಂತಾಮಣಿ
![Chintamani Hanuma Jayanthi Celebration](https://chikkaballapur.com/wp-content/uploads/2021/12/Chintamani-1024x576.jpg)
Chintamani : ಚಿಂತಾಮಣಿ ನಗರದ ಹೃದಯ ಭಾಗದಲ್ಲಿರುವ ವರದಾದ್ರಿ ಬೆಟ್ಟದ ಮೇಲಿನ ಆಂಜನೇಯಸ್ವಾಮಿ ದೇವಾಲಯ, ತಾಲ್ಲೂಕಿನ ಪುರಾಣ ಪ್ರಸಿದ್ಧ ಆಲಂಬಗಿರಿ ಆಂಜನೇಯಸ್ವಾಮಿ ದೇವಾಲಯದಲ್ಲಿ, ನಗರದ ಕನಂಪಲ್ಲಿ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ, ಅಂಬಾಜಿ ದುರ್ಗದ ಬೆಟ್ಟದ ಅಭಯ ಆಂಜನೇಯಸ್ವಾಮಿ ದೇವಾಲಯ, ಬೂರಗ ಮಾಕಲಹಳ್ಳಿಯ ವೀರಾಂಜ ನೇಯ ಸ್ವಾಮಿ ದೇವಾಲಯದಲ್ಲಿ, ಕುರುಟಹಳ್ಳಿಯ ಆಂಜನೇಯಸ್ವಾಮಿ ದೇವಾಲಯ, ಕಂಗಾನಹಳ್ಳಿ ಆಂಜನೇಯಸ್ವಾಮಿ, ಕೋಟಗಲ್ ಗ್ರಾಮ ಪಂಚಾಯಿತಿಯ ವೀರಪ್ಪಲ್ಲಿ ಗ್ರಾಮದ ಅಭಯ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಭಕ್ತರು ದೇವಾಲಯಕ್ಕೆ ವಿವಿಧ ಹೂವುಗಳಿಂದ ವಿಶೇಷ ಅಲಂಕಾರ ಮಾಡಿ ಅದ್ಧೂರಿಯಾಗಿ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಚೇಳೂರು
![Chelur Hanuma Jayanthi Celebration](https://chikkaballapur.com/wp-content/uploads/2021/12/Chelur-1024x576.jpg)
Chelur : ಚೇಳೂರಿನ ಇತಿಹಾಸ ಪ್ರಸಿದ್ಧ ಆಂಜನೇಯ ಸ್ವಾಮಿ ದೇವಾಲಯದಲ್ಲಿ, ಪಾತಪಾಳ್ಯ ಹೋಬಳಿಯ ಸೋಮನಾಥಪುರ ಗ್ರಾಮದ ಹೊರ ವಲಯದ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ, ಚೇಳೂರಿಗೆ ಸಮೀಪದ ಪಾಪಾಗ್ನಿ ನದಿ ದಡದ ತಾಡಿಗವಾಂಡ್ಲಪಲ್ಲಿ ಗ್ರಾಮದ ಆಂಜನೇಯ ದೇವಾಲಯದಲ್ಲಿ, ಪಾತಪಾಳ್ಯ ಹೋಬಳಿಯ ಬಿಳ್ಳೂರು ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿಯನ್ನು ಭಕ್ತರು ಸಡಗರ ಮತ್ತು ಸಂಭ್ರಮದಿಂದ ಆಚರಿಸಿದರು.
ಗೌರಿಬಿದನೂರು
![Gauribidanur Hanuma Jayanthi Celebration](https://chikkaballapur.com/wp-content/uploads/2021/12/Gouribidanur-1024x576.jpg)
Gauribidanur : ಗೌರಿಬಿದನೂರು ನಗರದ ಶ್ರೀ ಸಾಯಿ ಬಾಬಾ ಮಂದಿರದಲ್ಲಿ, ಗೌರಿಬಿದನೂರು ತಾಲ್ಲೂಕಿನ ನಗರಗೆರೆ ಹೋಬಳಿಯ ನಕ್ಕಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಚ್ಚಟ್ಲಹಳ್ಳಿಯಲ್ಲಿನ ಅಭಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಮಹೋತ್ಸವ ಹಾಗೂ ಸೀತಾರಾಮಲಕ್ಷ್ಮಣ ಸಹಿತ ಜಾತ್ರೆಯ ರಥೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.
ಬಾಗೇಪಲ್ಲಿ
![Bagepalli Hanuma Jayanthi Celebration](https://chikkaballapur.com/wp-content/uploads/2021/12/Bagepalli-1024x576.jpg)
Bagepalli : ಹನುಮ ಜಯಂತಿ ಅಂಗವಾಗಿ ಬಾಗೇಪಲ್ಲಿ ಪಟ್ಟಣದ ಬೈಲಾಂಜನೇಯ, ಗಡಿದಂನ ಎರಡುಕಣ್ಣು ಆಂಜನೇಯ, ನಗರ್ಲುಆಂಜನೇಯ ಸ್ವಾಮಿ ಸೇರಿದಂತೆ ತಾಲ್ಲೂಕಿನ ಆಂಜನೇಯ, ಶ್ರೀರಾಮ ದೇವಾಲಯಗಳಲ್ಲಿ ಅಂಜನೀಪುತ್ರನಿಗೆ ವಿಶೇಷ ಪೂಜಾ ಕೈಂಕಾರ್ಯಗಳು ನಡೆದವು.
ಶಿಡ್ಲಘಟ್ಟ
![Sidlaghatta Hanuma Jayanthi Celebration](https://chikkaballapur.com/wp-content/uploads/2021/12/sdl-1024x576.jpg)
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಾಲಯ, ಅಪ್ಪೇಗೌಡನಹಳ್ಳಿ ಗೇಟ್ ಬಯಲಾಂಜನೇಯಸ್ವಾಮಿ ದೇವಾಲಯ, ಶಿಡ್ಲಘಟ್ಟ ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯ, ಮಯೂರ ವೃತ್ತದ ಆಂಜನೇಯಸ್ವಾಮಿ, ಚಿಂತಾಮಣಿ ರಸ್ತೆಯಲ್ಲಿರುವ ವೀರಾಂಜನೇಯಸ್ವಾಮಿ ದೇಗುಲ, ಮುತ್ತೂರು ಗ್ರಾಮ, ಎಚ್.ಕ್ರಾಸ್, ಚೊಕ್ಕಂಡಹಳ್ಳಿ, ಎದ್ದಲತಿಪ್ಪೇನಹಳ್ಳಿ, ಜಂಗಮಕೋಟೆ ಕ್ರಾಸ್ ಮುಂತಾದೆಡೆ ಶ್ರದ್ಧಾ ಭಕ್ತಿಯಿಂದ ಭಕ್ತರು ಹನುಮ ಜಯಂತಿ ಆಚರಿಸಲಾಯಿತು.
ಚೌಡಸಂದ್ರ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಸೀತಾರಾಮ ಲಕ್ಷ್ಮಣ ಸಮೇತ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯ ಕಲ್ಯಾಣೋತ್ಸವ ಹಾಗೂ 32ನೇ ವಾರ್ಷಿಕೋ ತ್ಸವದ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜಾ ಮಹೋತ್ಸವ ದೊಂದಿಗೆ ವಿಶೇಷವಾಗಿ ಹನುಮ ಜಯಂತಿಯನ್ನು ಆಚರಿಸಲಾಯಿತು.
ಶಿಡ್ಲಘಟ್ಟ ತಾಲ್ಲೂಕಿನ ನಾಗಮಂಗಲ ಗ್ರಾಮದ ಅಭಯ ಹಸ್ತಾಂಜನೇಯಸ್ವಾಮಿ ದೇವಾಲಯದಲ್ಲಿ 16ನೇ ವರ್ಷದ ಹನುಮಜಯಂತಿಯನ್ನು ಆಚರಿಸಲಾಯಿತು. ಚೋಳರ ಕಾಲದ ಅಭಯ ಹಸ್ತಾಂಜನೇಯಸ್ವಾಮಿ ದೇವಾಲಯ ತಾಲ್ಲೂಕಿನ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಶಿಥಿಲಗೊಂಡಿದ್ದ ದೇವಾಲಯವನ್ನು ಗ್ರಾಮಸ್ಥರು ನವೀಕರಿಸಿದ ನಂತರ ಪ್ರತಿ ವರ್ಷವೂ ಹನುಮ ಜಯಂತಿ ವಿಶೇಷವಾಗಿ ಒಗ್ಗಟ್ಟಿನಿಂದ ಆಚರಿಸಿಕೊಂಡು ಬರಲಾಗುತ್ತಿದೆ.