Chikkaballapur : ಚಿಕ್ಕಬಳ್ಳಾಪುರ ನಗರದ ಕಂದವಾರ ಬಾಗಿಲ CVV ಸರ್ಕಲ್ ಬಳಿಯ ಕಾಳಿಕಾಂಬ ಕಮಠೇಶ್ವರ (Kalikamba Kamateshwara Karaga) ದೇವಾಲಯದ 10ನೇ ವರ್ಷದ ಹೂವಿನ ಕರಗ ಮಹೋತ್ಸವ ಶನಿವಾರ ರಾತ್ರಿಯಿಂದ ಭಾನುವಾರ ರಾತ್ರಿಯವರೆಗೂ ಅದ್ದೂರಿಯಾಗಿ ನಡೆಸಲಾಯಿತು. ಕರಗದ ಪ್ರಯುಕ್ತ ನಗರದ ಪ್ರಮುಖ ರಸ್ತೆಗಳಿಗೆ ದೀಪಾಲಂಕಾರ ಮಾಡಲಾಗಿತ್ತು.
ಕರಗದ ಪೂಜಾರಿಯಾಗಿದ್ದ ವಾಪಸಂದ್ರದ ಎಂ.ಅಂಜಿತ್ ಕುಮಾರ್ ಅವರು ಹೂವಿನ ಕರಗ ಹೊತ್ತು ರಾತ್ರಿ 10ರ ಸುಮಾರಿಗೆ ಒಂದು ಕೈಯಲ್ಲಿ ಕತ್ತಿ ಮತ್ತೊಂದು ಕೈಯಲ್ಲಿ ಮಂತ್ರದಂಡ ಹಿಡಿದು ದೇವಾಲಯದ ಗರ್ಭಗುಡಿಯಿಂದ ಹೊರಕ್ಕೆ ಬರುತ್ತಿದ್ದಂತೆ ತಮಟೆ ವಾದನ, ಮಂಗಳ ವಾದ್ಯಗಳು ಮೊಳಗಿದವು. ನಗರದ ವಿವಿಧೆಡೆ ಕರಗಧಾರಿಗಳ ಸ್ವಾಗತಕ್ಕೆ ಮನೆಗಳ ಮುಂದೆ ರಂಗೋಲಿ ಬಿಡಿಸಿ, ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು.
ದೇವಾಲಯದ ಬಳಿ ನಿರ್ಮಿಸಿದ್ದ ವೇದಿಕೆಯಲ್ಲಿ ನಡೆದ ಕರಗದ ಪೂಜಾರಿ ನೃತ್ಯವನ್ನು ಅಪಾರ ಭಕ್ತರು ಕಣ್ತುಂಬಿಕೊಂಡರು.
