Chikkaballapur : ಚಿಕ್ಕಬಳ್ಳಾಪುರ ನಗರದ ಎಂ.ಜಿ ರಸ್ತೆಯಲ್ಲಿರುವ ಐತಿಹಾಸಿಕ ಮರುಳಸಿದ್ದೇಶ್ವರ ದೇವಾಲಯದ (Marulasiddeshwara temple) ಮುಂಭಾಗದಲ್ಲಿದ್ದ ನಂದಿ (Nandi) (ಬಸವ) ವಿಗ್ರಹವನ್ನು ಭಾನುವಾರ ರಾತ್ರಿ ಅನಾಮಿಕ ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ (statue vandalism) ವರದಿಯಾಗಿದೆ.
200ರಿಂದ 300 ವರ್ಷಗಳ ಇತಿಹಾಸ ಹೊಂದಿರುವ ಈ ದೇಗುಲದ ಮುಖ್ಯ ಪ್ರವೇಶ ದ್ವಾರದ ಸಮೀಪ ನಂದಿ ವಿಗ್ರಹವಿದ್ದು, ಭಕ್ತರು ಪ್ರತಿನಿತ್ಯ ಪೂಜೆ ಸಲ್ಲಿಸುತ್ತಿದ್ದರು. ಕಿಡಿಗೇಡಿಗಳು ವಿಗ್ರಹದ ತಲೆಯನ್ನು ಮುರಿದಿದ್ದು, ಭಕ್ತರಲ್ಲಿ ದುಃಖ ಮತ್ತು ಆಕ್ರೋಶ ಉಂಟಾಗಿದೆ.
ಸೋಮವಾರ ಬೆಳಿಗ್ಗೆ ದೇವಾಲಯಕ್ಕೆ ಆಗಮಿಸಿದ ಭಕ್ತರು ಹಾಗೂ ದೇವಾಲಯದ ಸಮಿತಿ ಸದಸ್ಯರು ಈ ಕೃತ್ಯವನ್ನು ಕಠಿಣವಾಗಿ ಖಂಡಿಸಿದರು. “ಈ ಕೃತ್ಯ ಮಾಡಿರುವವರನ್ನು ತಕ್ಷಣವೇ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು, ಭಕ್ತರ ಭಾವನೆಗಳಿಗೆ ನ್ಯಾಯ ದೊರಕಬೇಕು” ಎಂದು ಮುನಿರಾಜು, ನಾರಾಯಣಸ್ವಾಮಿ, ಮುನಿರೆಡ್ಡಿ ಸೇರಿದಂತೆ ಅನೇಕರು ಆಗ್ರಹಿಸಿದರು.
ಘಟನೆಯ ಮಾಹಿತಿ ಪಡೆದ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ.