Chikkaballapur : ಚಿಕ್ಕಬಳ್ಳಾಪುರದಲ್ಲಿ ಖಾಸಗಿ ಶಾಲಾ-ಕಾಲೇಜುಗಳು ಹೆಚ್ಚಿದ ಶುಲ್ಕವನ್ನು (Private schools fee hike protest)ವಸೂಲಿಸುತ್ತಿರುವುದನ್ನು ತಡೆಯುವಂತೆ ಹಾಗೂ ಪೋಷಕರಿಗೆ ಶುಲ್ಕ ಪಾವತಿಸಲು ಗಡುವು ನೀಡುವಂತೆ ಕನ್ನಡಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಪದಾಧಿಕಾರಿಗಳು, ಶಾಲಾ-ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಕೆಲವು ಖಾಸಗಿ ಸಂಸ್ಥೆಗಳು ಪೋಷಕರಿಗೆ ಹೆಚ್ಚಿನ ಶುಲ್ಕದ ಬೇಡಿಕೆ ಇಟ್ಟು ತೊಂದರೆ ನೀಡುತ್ತಿರುವುದಾಗಿ ಆರೋಪಿಸಿದರು. ಅವರು, ಈ ದುಬಾರಿ ಶುಲ್ಕವನ್ನು ದಂದೆಯನ್ನಾಗಿ ಮಾಡಿಕೊಂಡಿರುವುದನ್ನು ತಡೆಯಲು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು.
ಇದೇ ವೇಳೆ, ಜಿಲ್ಲಾ ಪಶು ಆಸ್ಪತ್ರೆಯಲ್ಲಿ ನುರಿತ ಸಿಬ್ಬಂದಿ ಕೊರತೆ ಹಾಗೂ ಔಷಧಿಗಳ ಲಭ್ಯತೆ ಸಮಸ್ಯೆಗಳಿವೆ ಎಂದು ಅವರು ಗಮನ ಸೆಳೆದರು. ಪಶುಗಳಿಗೆ ಚಿಕಿತ್ಸೆ ಪಡೆಯಲು ಬರುವವರಿಗೆ ಅನುಕೂಲ ಕಲ್ಪಿಸಲು ಸಮಗ್ರ ಪರಿಶೀಲನೆ ನಡೆಸಿ, ಸಮಸ್ಯೆಗಳನ್ನು ಪರಿಹರಿಸಬೇಕೆಂದು ಮನವಿ ಮಾಡಿದರು.
ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಪಶು ಆಸ್ಪತ್ರೆಯ ಕಾರ್ಯವೈಖರಿಯ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಈ ನಿಯೋಗದಲ್ಲಿ ಕನ್ನಡಸೇನೆ ಜಿಲ್ಲಾ ಅಧ್ಯಕ್ಷ ರವಿಕುಮಾರ್, ಕೆ.ಎನ್. ಉದಯಶಂಕರ್, ಶಿವಕುಮಾರ್, ಮೋಹನ್ಕುಮಾರ್, ಶ್ರೀಧರ್, ಕೆ. ಬಾಲರಾಜು, ಸುಬ್ರಮಣಿ, ಶ್ರವಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
