Home Sidlaghatta ನಿವೇಶನಗಳಿಗಾಗಿ ಮುತ್ತೂರು ಗ್ರಾಮಸ್ಥರಿಂದ ಕೆರೆಯಂಗಳ ಸ್ವಚ್ಚತೆ ; ಅಧಿಕಾರಿಗಳಿಂದ ತಡೆ

ನಿವೇಶನಗಳಿಗಾಗಿ ಮುತ್ತೂರು ಗ್ರಾಮಸ್ಥರಿಂದ ಕೆರೆಯಂಗಳ ಸ್ವಚ್ಚತೆ ; ಅಧಿಕಾರಿಗಳಿಂದ ತಡೆ

0
194

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತೂರು ಗ್ರಾಮಸ್ಥರು ವಾಸ ಮಾಡಲು ಯೋಗ್ಯವಾದ ಮನೆಗಳಿಲ್ಲದ ಕಾರಣ, ಕೆರೆಯಂಗಳದಲ್ಲಿರುವ ಸರ್ಕಾರಿ ಜಾಗದಲ್ಲಿ ನೀವೇಶನಗಳನ್ನು ಹಂಚಿಕೆ ಮಾಡುವಂತೆ ಒತ್ತಾಯಿಸಿ, ಗ್ರಾಮಸ್ಥರೇ ಜೆಸಿಬಿಗಳನ್ನು ಇಟ್ಟುಕೊಂಡು ಸ್ವಚ್ಚಗೊಳಿಸಲು ಮುಂದಾಗಿದ್ದರು. ಈ ವೇಳೆ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಶಶಿಧರ್ ಅವರು, ತಹಶೀಲ್ದಾರರ ಬಳಿ ಚರ್ಚಿಸಿದ ನಂತರ, ಅಂತಿಮಗೊಳಿಸುವ ತನಕ ಯಾವುದೇ ಕೆಲಸವನ್ನು ಮಾಡದಂತೆ ತಡೆ ಹಾಕಿದ್ದಾರೆ.

ಈ ವೇಳೆ ಮುತ್ತೂರು ಗ್ರಾಮದ ಮುಖಂಡ ವೇಣುಗೋಪಾಲ್ ಮಾತನಾಡಿ, ನಮ್ಮೂರಿನಲ್ಲಿ ನಾವು ಹಂದಿಗೂಡುಗಳಂತಿರುವ ಮನೆಗಳಲ್ಲಿ ವಾಸ ಮಾಡಿಕೊಂಡಿದ್ದೇನೆ. ಒಂದು ದ್ವಿಚಕ್ರ ವಾಹನವೂ ಹೋಗುವುದಕ್ಕೆ ಸಾಧ್ಯವಾಗದಂತಹ ರಸ್ತೆಗಳಲ್ಲಿ ನಾವು ಓಡಾಡುತ್ತಿದ್ದೇವೆ. ಒಂದೊಂದು ಮನೆಗಳಲ್ಲಿ ಸುಮಾರು 3-4 ಕುಟುಂಬಗಳವರು ವಾಸವಾಗಿದ್ದೇವೆ. ಸುಮಾರು 30 ವರ್ಷಗಳಿಂದ ನಮಗೆ ನಿವೇಶನಗಳನ್ನು ಹಂಚಿಕೆ ಮಾಡುವಂತೆ ಪ್ರತಿಯೊಂದು ಗ್ರಾಮಸಭೆಗಳಲ್ಲಿ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಮನವಿಗಳು ಕೊಡುತ್ತಲೇ ಇದ್ದೇವೆ. ಆದರೆ, ಇದುವರೆಗೂ ಪ್ರಯೋಜನವಾಗಿಲ್ಲ.

ನಮ್ಮೂರಿನಲ್ಲಿ ವಾಸ ಮಾಡುವುದಕ್ಕೆ ಕಷ್ಟವಾಗಿದ್ದರಿಂದ ಕೆಲವರು ಬಂದು ಕೆರೆ ಅಂಗಳದಲ್ಲೆ ಸುಮಾರು 20 ವರ್ಷಗಳ ಹಿಂದೆ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದರು. ಹಣಕಾಸಿನ ತೊಂದರೆಯಿಂದಾಗಿ ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ, ಮನೆಗಳು ನೆಲಸಮವಾಗಿವೆ ಎಂದರು.

ಗ್ರಾಮಸ್ಥ ಮಂಜುನಾಥ್ ಮಾತನಾಡಿ, ನಾವು ವಾಸವಾಗಿರುವ ಮನೆಗಳ ಪೈಕಿ ಹಲವರ ಮನೆಗಳ ಮೇಲ್ಛಾವಣಿಗಳು ಇಂದಿಗೂ ಜಂತಿಗೆಯಿಂದ ಕೂಡಿವೆ. ಆರ್ಥಿಕವಾಗಿ ಸಧೃಡರಾಗದ ಕಾರಣದಿಂದಾಗಿ ಮನೆಗಳನ್ನು ದುರಸ್ಥಿಮಾಡಿಕೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ. ಕಾಲೋನಿಯಲ್ಲಿ ಶೌಚಾಲಯಗಳು ಕಟ್ಟಿಕೊಳ್ಳುವುದಕ್ಕೂ ಜಾಗವಿಲ್ಲ. ಊರಿನ ಸುತ್ತಮುತ್ತಲಿನಲ್ಲಿ ಎಲ್ಲಿಯೂ ಸರ್ಕಾರಿ ಜಾಗವಿಲ್ಲ. ಆದ್ದರಿಂದ ನಮ್ಮೂರಿಗೆ ಸೇರಿರುವ ಗಂಗನಹಳ್ಳಿಯ ಬಳಿಯಿರುವ ಸರ್ಕಾರಿ ಜಾಗದಲ್ಲಿ ನಮಗೆ ನಿವೇಶನಗಳನ್ನು ಮಂಜೂರು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!