![](https://www.sidlaghatta.com/wp-content/uploads/2022/06/15JunSd02b.jpg)
Sidlaghatta : ಶಿಡ್ಲಘಟ್ಟ ನಗರದ ಕಾಮಾಟಿಗರ ಪೇಟೆಯಲ್ಲಿರುವ ಶ್ರೀ ಗಂಗಮ್ಮದೇವಿ ದೇವಾಲಯ (Gangamma Devi Temple) ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಮಾತೆ ಶ್ರೀ ದ್ರೌಪತಮ್ಮನವರ ಮೂರನೇ ವರ್ಷದ ಹೂವಿನ ಕರಗ (Sri Draupatamma Karaga) ಮಹೋತ್ಸವವು ಮಂಗಳವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ಕರಗದ ಪ್ರಯುಕ್ತ ನಗರದ ಅಶೋಕರಸ್ತೆಯ ಹೂವಿನ ವೃತ್ತದಲ್ಲಿ ವಾದ್ಯಗೋಷ್ಠಿ ಆಯೋಜಿಸಲಾಗಿತ್ತು. ಮುಳಬಾಗಿಲು ನಾಗರಾಜು ರಾತ್ರಿಯಿಡೀ ಕರಗವನ್ನು ಹೊತ್ತು ತಮಟೆಯ ವಾದನ ತಂಡದೊಂದಿಗೆ ಊರೆಲ್ಲಾ ಸುತ್ತಿದಾಗ ದಾರಿಯುದ್ದಕ್ಕೂ ಮಲ್ಲಿಗೆ ಹೂಗಳನ್ನು ಅರ್ಪಿಸಿ, ಆರತಿ ಬೆಳಗುತ್ತಿದ್ದರು. ಕೆಲವೆಡೆ ಕರಗದ ಆಗಮನಕ್ಕಾಗಿ ರಸ್ತೆಯ ಮೇಲೆಲ್ಲಾ ರಂಗೋಲಿಯನ್ನು ಬಿಡಿಸಲಾಗಿತ್ತು. ರಸ್ತೆಯನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ವೀರಕುಮಾರರು ಅಲಗು ಸೇವೆ ಮಾಡಿದರು. ಹಲಗೆ, ತಮಟೆ ವಾದ್ಯಗಳೊಂದಿಗೆ ಕರಗ ದೇವಾಲಯದ ಪ್ರದಕ್ಷಿಣೆ ಮಾಡಿ ನರ್ತಿಸಿತು. ಮುಂದೆ ಕತ್ತಿ ಹಿಡಿದ ವೀರಕುಮಾರರು, ಹಿಂದೆ ಕುಣಿಯುತ್ತಾ ಕರಗ ರಾತ್ರಿಯಿಡೀ ಊರೆಲ್ಲಾ ಸಂಚರಿಸಿತು. ಪ್ರತಿಯೊಬ್ಬರೂ ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ ಅಲ್ಲಿಗೆ ಕರಗ ಬರುತ್ತಿದ್ದಂತೆ ಭಕ್ತಿಯಿಂದ ಆರತಿ ಬೆಳಗಿ ಮಲ್ಲಿಗೆ ಹೂಗಳನ್ನು ಸಮರ್ಪಿಸಿದರು. ಊರಿನ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಬುಧವಾರ ಒನಕೆ ಕರಗ, ಸಪ್ತಕಳಸ ಕರಗ ಮತ್ತು ಅಗ್ನಿಕುಂಡ ಪ್ರವೇಶವನ್ನು ದೇವಸ್ಥಾನದ ಬಳಿ ನಡೆಸಲಾಯಿತು.