Chintamani : ಚಿಂತಾಮಣಿ ತಾಲ್ಲೂಕಿನ ಕಟಮಾಚನಹಳ್ಳಿಯಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಹಾಲು ಒಕ್ಕೂಟ ಹಾಗೂ ಸಹಕಾರ ಇಲಾಖೆ ವತಿಯಿಂದ ಬುಧವಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗೆ ತರಬೇತಿ ಕಾರ್ಯಾಗಾರ ನಡೆಸಲಾಯಿತು. ಕಾರ್ಯಾಗಾರದಲ್ಲಿ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಾಹಕರ ಆಡಳಿತ, ಲೆಕ್ಕಪತ್ರ ನಿರ್ವಹಣೆ, ಗುಣಮಟ್ಟದ ಹಾಲು ಉತ್ಪಾದನೆ ಮುಂತಾದ ವಿಷಯಗಳ ಬಗ್ಗೆ ಹಳೆ ಅಧಿಕಾರಿಗಳು ಮತ್ತು ತಜ್ಞರು ತರಬೇತಿ (milk cooperative president Workshop) ನೀಡಿದರು.
ಕಾರ್ಯಕ್ರಮದಲ್ಲಿ ಕೋಚಿಮುಲ್ ಮಾಜಿ ನಿರ್ದೇಶಕ ವೈ.ಬಿ. ಅಶ್ವತ್ಥನಾರಾಯಣಬಾಬು ಮಾತನಾಡಿ “ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ. ಚಿಂತಾಮಣಿಗೆ ಮೂರು ಸ್ಥಾನ ಸಿಗಲಿದೆ. ಇತ್ತೀಚಿನ ದಶಕದಲ್ಲಿ ಹಾಲು ಉತ್ಪಾದಕರ ಮತ್ತು ಮಹಿಳಾ ಹಾಲು ಸಹಕಾರ ಸಂಘಗಳ ಸ್ಥಾಪನೆ ಹೆಚ್ಚಾಗಿದೆ. ಬಿಎಂಸಿ ಕೇಂದ್ರಗಳು 12 ರಿಂದ 45ಕ್ಕೆ ಏರಿಕೆ ಆಗಿವೆ. ಇದರಿಂದ ಗುಣಮಟ್ಟದ ಹಾಲು ಸಂಗ್ರಹ ಸಾಧ್ಯವಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಎಲ್.ವೈ. ನರಸಿಂಹರೆಡ್ಡಿ ಅಧ್ಯಕ್ಷತೆ ವಹಿಸಿದರು. ಎಚ್.ವಿ. ನಾಗರಾಜ್, ಕೆ.ಎನ್. ನವೀನ್, ಆರ್. ಮುರಳಿ, ಶ್ರೀನಿವಾಸರೆಡ್ಡಿ ಸೇರಿದಂತೆ ತಾಲ್ಲೂಕಿನ ಹಲವಾರು ಅಧ್ಯಕ್ಷರು, ಅಧಿಕಾರಿಗಳು, ಜನಪ್ರತಿನಿಧಿಗಳು ಹಾಜರಿದ್ದರು.
