Chikkaballapur : ಚಿಕ್ಕಬಳ್ಳಾಪುರ ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಚಿಕ್ಕಬಳ್ಳಾಪುರ ನಗರದಲ್ಲಿ ಭಾನುವಾರ ಜಿಲ್ಲಾ ಬ್ರಾಹ್ಮಣ ಸಮ್ಮೇಳನದ (District Brahmin Sammelana) ಅಂಗವಾಗಿ ಮುಖ ರಸ್ತೆಗಳಲ್ಲಿ ಶಂಕರಾಚಾರ್ಯರ ಪುತ್ಥಳಿಯ ಮೆರವಣಿಗೆ ಮತ್ತು ವೇದಘೋಷಗಳು, ಗಾಯತ್ರಿ ಮಂತ್ರ ಪಠಣ, ಸಂಗೀತ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸಂಸದ ಡಾ.ಕೆ.ಸುಧಾಕರ್ ಮಾತನಾಡಿ “ನಮ್ಮ ಧರ್ಮ, ಭಕ್ತಿ ಮತ್ತು ಗುರುಪರಂಪರೆ ದೇಶದಲ್ಲಿ ಈಗಲೂ ಮುಂದುವರಿಯಲು ಕಾರಣ ಬ್ರಾಹ್ಮಣ ಸಮುದಾಯ. ದೇವರನ್ನು ನಿತ್ಯ ಯಾರೂ ಪೂಜೆ ಮಾಡುವರು ಅವರಿಗೆ ಕೆಟ್ಟ ಆಲೋಚನೆಗಳು ಬರುವುದಿಲ್ಲ. ರಾಜ ಮಹಾರಾಜರ ಕಾಲದಿಂದ ಬ್ರಾಹ್ಮಣ ಸಮುದಾಯಕ್ಕೆ ದೇಶದಲ್ಲಿ ವಿಶೇಷ ಗೌರವವಿದ್ದು ಆರ್ಥಿಕವಾಗಿ ಹಿಂದುಳಿದ ಈ ಸಮಾಜದ ಅಭಿವೃದ್ಧಿಗೆ ಇಂದು ಸರ್ಕಾರಗಳು ಒತ್ತು ಕೊಡುತ್ತಿಲ್ಲ. ಆದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲಾತಿ ನೀಡಿದರು. ಈ ಮೀಸಲಾತಿ ಅನುಷ್ಠಾನಕ್ಕೆ ಪ್ರಯತ್ನಿಸುವೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ಬ್ರಾಹ್ಮಣ ಮಹಾಸಭಾ ಜಿಲ್ಲಾ ಅಧ್ಯಕ್ಷ ಕೆ.ನಾಗಭೂಷಣ್ರಾವ್, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್, ಸಂಸ್ಕೃತ ವಿದ್ವಾಂಸ ಸಂಪತ್ತೂರ್ ರಂಗನಾಥ್, ಜಿಲ್ಲಾ ಬ್ರಾಹ್ಮಣ ಮಹಾಸಭಾ ಮಾಜಿ ಅಧ್ಯಕ್ಷರಾದ ವಾಸುದೇವರಾವ್, ಅಟ್ಟೂರು ವೆಂಕಟೇಶಯ್ಯ, ಚಿಂತಾಮಣಿ ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು.