Chintamani : ರೈತರಿಗೆ ಮಾರಕವಾಗಿರುವ ಕುಲಾಂತರಿ ಸಾಸಿವೆ (Hybrid Mustard Seed) ಬೆಳೆ ಬೆಳೆಯಲು ಅನುಮತಿ ನೀಡಿರುವ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ, ಬದಲಾವಣೆ ಸಚಿವಾಲಯದ ವಿರುದ್ಧ ಬಳ್ಳಿ ಬಳಗ ಯುವ ಕೃಷಿಕರ ವೇದಿಕೆ ಹಾಗೂ ಯುವಯಾನ ಬಳಗ ವಿರೋಧ ವ್ಯಕ್ತಪಡಿಸಿ (Protest), ವೇದಿಕೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಶುಕ್ರವಾರ ಚಿಂತಾಮಣಿ ನಗರದಲ್ಲಿ ಅನುಮೋದನೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಮತ್ತು ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಮೂಲಕ ಪ್ರಧಾನಮಂತ್ರಿಗೆ (Prime Minister) ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಬಳ್ಳಿ ಬಳಗ ಯುವ ಕೃಷಿಕರ ವೇದಿಕೆ ಶಶಿರಾಜ್ ಹರತಲೆ ” ಸಾವಯವ ಕೃಷಿಗೆ ಉತ್ತೇಜನ ನೀಡುತ್ತೇವೆ ಎನ್ನುತ್ತಾ ರಾಸಾಯನಿಕ ಕೃಷಿಗೆ ಪ್ರೋತ್ಸಾಹ ನೀಡುತ್ತಿದೆ. ಈ ತಂತ್ರಜ್ಞಾನದಿಂದ ಮಾನವನ ಆರೋಗ್ಯಕ್ಕೆ ಮಾರಕವಾಗುವ ಎಲ್ಲ ಅಪಾಯಗಳಿದ್ದು ಇದರ ಜತೆಗೆ ಪರಿಸರ, ಜೈವಿಕ ವ್ಯವಸ್ಥೆ ಮೇಲೂ ಪರಿಣಾಮ ಬೀರಲಿದೆ. ಕುಲಾಂತರಿ ತಳಿ ಪರಿಸರಕ್ಕೆ ವ್ಯಾಪಿಸಿದರೆ ಅದರಿಂದಾಗುವ ಹಾನಿ ಮತ್ತೆ ಸರಿಪಡಿಸಲಾಗದು. ಇತರ ತಳಿಗಳ ಮೇಲೂ ಇದರ ವಿಶಕಾರಿ ಅಂಶ ಸೇರ್ಪಡೆಯಾಗುತ್ತದೆ. ಇದು ರೈತರ ಜಮೀನುಗಳಿಗೆ ಲಗ್ಗೆಯಿಟ್ಟರೆ ಮುಂದಿನ ತಲೆಮಾರು ನೆಲದ ಸೊಗಡಿನ ಸಾಸಿವೆ ಮರೆತು ಪ್ರನಾಳದಲ್ಲಿ ರೂಪಗೊಂಡ ಕೃತಕ ಸಾಸಿವೆ ಬಳಸುವ ಕಾಲ ಬರಲಿದೆ” ಎಂದು ಆತಂಕ ವ್ಯಕ್ತಪಡಿಸಿದರು.ಹೇಳಿದರು.
ಬಳ್ಳಿ ಬಳಗ ಯುವ ಕೃಷಿಕರ ವೇದಿಕೆ ಬಾಬುರೆಡ್ಡಿ, ನಾಗರಾಜು, ಚೌಡಪ್ಪ, ಬೇರು ಬೆವರು ಕಲಾ ಬಳಗದ ಸೋರಪ್ಪಲ್ಲಿ ಚಂದ್ರಶೇಖರ್, ಯುವಯಾನ ಬಳಗದ ಮನೋಜ್, ನಾನಿ, ಮನೋಹರ, ತಸ್ಲಿಮಾ, ಮುಸ್ಕಾನ್, ಮದಿಹಾ, ಅಕ್ಷಯ್, ಅಕ್ಷತಾ, ಅರ್ಚನ, ಕೀರ್ತಿ, ನಂದಿನಿ, ಸರ್ವಮಂಗಳ, ಸುವರ್ಣ, ಸುಷ್ಮಿತ, ಶಾಹಿಸ್ತಾ ಬಾನು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
