Chikkaballapur : ಜಲಜೀವನ್ ಮಿಷನ್ (Jal Jeevan Mission: Har Ghar Jal) ಯೋಜನೆ ಅನುಷ್ಠಾನ ಸಂಬಂಧ ಜಿಲ್ಲೆಯಲ್ಲಿ ಎದುರಾಗಿರುವ ತೊಡಕುಗಳನ್ನು ನಿವಾರಿಸಲು ಬುಧವಾರ ಚಿಕ್ಕಬಳ್ಳಾಪುರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಸಭೆ (Meeting) ನಡೆಸಲಾಯಿತು.
ಈ ವೇಳೆ ಮಾತನಾಡಿದ ಸಚಿವ ಡಾ.ಎಂ.ಸಿ.ಸುಧಾಕರ್ “ಗ್ರಾಮೀಣ ಭಾಗದಲ್ಲಿ ಮನೆಗಳಿಗೆ ಕುಡಿಯುವ ನೀರು ಪೂರೈಸುವ ಜಲಜೀವನ್ ಮಿಷನ್ ಯೋಜನೆ ಜಿಲ್ಲೆಯಲ್ಲಿ ವಿಫಲ ಆಗಲು ಬಿಡುವುದಿಲ್ಲ. 2024ರ ವೇಳೆಗೆ ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿದೆ. ಒಟ್ಟಾರೆ ಜಿಲ್ಲೆಯ 1,645 ಗ್ರಾಮಗಳಲ್ಲಿ ಈ ಯೋಜನೆಯ ಅನುಷ್ಠಾನದ ಗುರಿ ಇದ್ದು ಸುಮಾರು ಗ್ರಾಮಗಳಲ್ಲಿನ ಕಾಮಗಾರಿಗಳ ಟೆಂಡರ್ನಲ್ಲಿ ಗುತ್ತಿಗೆದಾರರು ಭಾಗವಹಿಸುತ್ತಿಲ್ಲ. ಆದ್ದರಿಂದ ಜಿಲ್ಲೆಯ 1,100 ಗ್ರಾಮಗಳಲ್ಲಿ ಯೋಜನೆಯ ಅನುಷ್ಠಾನ ವಿಳಂಬ ಆಗಿದ್ದು 1,002 ಗ್ರಾಮಗಳಲ್ಲಿ ಟೆಂಡರ್ ಆಗಬೇಕಿದೆ” ಎಂದು ತಿಳಿಸಿದರು.
ಜಿಲ್ಲೆಯ 1,499 ಗ್ರಾಮಗಳಲ್ಲಿ ಜಲಜೀವನ ಮಿಷನ್ ಯೋಜನಾ ವೆಚ್ಚವು ₹1 ಕೋಟಿಯ ಒಳಗೆ ಮತ್ತು 146 ಗ್ರಾಮಗಳಲ್ಲಿ ₹1 ಕೋಟಿಗಿಂತ ಹೆಚ್ಚಿದೆ. ಬಾಗೇಪಲ್ಲಿ ತಾಲ್ಲೂಕಿನಲ್ಲಿ 359 ಗ್ರಾಮಗಳಲ್ಲಿ ಚಿಕ್ಕಬಳ್ಳಾಪುರ 236 ಗ್ರಾಮಗಳಲ್ಲಿ , ಚಿಂತಾಮಣಿ 376 ಗ್ರಾಮಗಳಲ್ಲಿ , ಗೌರಿಬಿದನೂರು ತಾಲ್ಲೂಕಿನ 296, ಗುಡಿಬಂಡೆ ತಾಲ್ಲೂಕಿನ 114 ಮತ್ತು ಶಿಡ್ಲಘಟ್ಟ ತಾಲ್ಲೂಕಿನ 264 ಗ್ರಾಮಗಳಲ್ಲಿ ಯೋಜನಾ ವರದಿ ಸಿದ್ಧವಾಗಿದ್ದು ಜಿಲ್ಲೆಯಲ್ಲಿ 642 ಗ್ರಾಮಗಳಲ್ಲಿ ಮಾತ್ರ ಗುತ್ತಿಗೆದಾರರು ಟೆಂಡರ್ನಲ್ಲಿ ಭಾಗವಹಿಸಿದ್ದಾರೆ. 535 ಗ್ರಾಮಗಳಲ್ಲಿ ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ ಎಂದು ತಿಳಿಸಿದ ಸಚಿವರು ಯೋಜನೆಯ ಅನುಷ್ಠಾನಕ್ಕೆ ಕಾಲಮಿತಿ ನಿಗದಿ ಪಡಿಸಿ ಕಾರ್ಯಾದೇಶ ನೀಡಿದ ದಿನದಿಂದ ಯೋಜನೆ ಫಲಾನುಭವಿಗೆ ತಲುಪುವವರೆಗೆ ಯಾವ ಕೆಲಸಕ್ಕೆ ಎಷ್ಟು ಸಮಯ ಅಗತ್ಯ ಎಂದು ಕಾಲಮಿತಿ ನಿಗದಿ ಪಡಿಸಬೇಕು. ಆ ಪ್ರಕಾರ ಯೋಜನೆ ಅನುಷ್ಠಾನ ಆಗಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಶಾಸಕ ಪ್ರದೀಪ್ ಈಶ್ವರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಎನ್.ಭಾಸ್ಕರ್, ಗುತ್ತಿಗೆದಾರರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.