Home Sidlaghatta ಬಯಲು ಸೀಮೆಯ ಭಾಗಕ್ಕೆ ಕೃಷ್ಣಾ ನದಿ ನೀರನ್ನು ಹರಿಸಲು ಮನವಿ

ಬಯಲು ಸೀಮೆಯ ಭಾಗಕ್ಕೆ ಕೃಷ್ಣಾ ನದಿ ನೀರನ್ನು ಹರಿಸಲು ಮನವಿ

0

Sidlaghatta : ಬಯಲು ಸೀಮೆಯ ಭಾಗಕ್ಕೆ ಕೃಷ್ಣಾ ನದಿ ನೀರನ್ನು ಹರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಕೃಷಿಗಾಗಿ ಈ ಭಾಗಕ್ಕೆ ಕೃಷ್ಣಾ ನದಿ ನೀರನ್ನು ಹರಿಸಬೇಕು ಎಂದು ಶಿಡ್ಲಘಟ್ಟ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್ ಅವರು ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಕೇಂದ್ರದ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ದೆಹಲಿಯ ಅವರ ಕಚೇರಿಯಲ್ಲಿ ಭೇಟಿ ಮಾಡಿ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಬಯಲು ಸೀಮೆ ಪ್ರದೇಶಕ್ಕೆ ಕೃಷ್ಣಾ ನದಿ ನೀರನ್ನು ಹರಿಸಲು ಕ್ರಮವಹಿಸುವಂತೆ ಮನವಿ ಮಾಡಿದರು.

ಈ ಭಾಗದಲ್ಲಿ ಅಂತರ್ಜಲ ಮಟ್ಟ 1500 ಅಡಿಗಳಷ್ಟು ಆಳಕ್ಕೆ ಕುಸಿದಿದೆ. ಅಷ್ಟು ಆಳಕ್ಕೆ ಕೊಳವೆಬಾವಿ ಕೊರೆಸಿದರೂ ಅದರಲ್ಲಿ ನೀರು ಸಿಗುವ ಪ್ರಮಾಣ ಕೇವಲ ಶೇ 30 ರಷ್ಟು ಇದೆ. ಸಿಗುವ ನೀರಿನಲ್ಲೂ ಫ್ಲೊರೈಡ್ ಸೇರಿದಂತೆ ಅನೇಕ ರೀತಿಯ ಹಾನಿಕಾರಕ ಅಂಶಗಳು ಇವೆ.

ಈ ನೀರು ಕೃಷಿಗೂ ಹಾಗೂ ಕುಡಿಯಲು ಹಾನಿಕಾರಕವಾಗಿದೆ. ಪ್ರಯೋಗಾಲಯಗಳಲ್ಲಿ ಈ ಅಂಶ ಈಗಾಗಲೆ ಬಯಲಾಗಿದ್ದು ವಿಧಿಯಿಲ್ಲದೆ ವಿಷಪೂರಿತ ನೀರನ್ನು ಬಳಸುವ ಅನಿವಾರ್ಯತೆ ನಮ್ಮ ಈ ಭಾಗದ ಜನರದ್ದಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇತ್ತೀಚಿನ ವರ್ಷಗಳಲ್ಲಿ ಈ ಐದೂ ಜಿಲ್ಲೆಗಳಲ್ಲಿ ಹೂವು ಹಣ್ಣು ಮುಂತಾದ ತೋಟಗಾರಿಕೆ ಬೆಳೆಗಳು ಹೆಚ್ಚೆಚ್ಚು ಬೆಳೆದು ರಾಷ್ಟ್ರ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತಿತ್ತು. ಆದರೆ ಕೆಲ ವರ್ಷಗಳಿಂದಲೂ ಅಂತರ್ಜಲ ಮಟ್ಟ ಕುಸಿದ ಕಾರಣ ನೀರು ಸಾಲದಾಗಿದೆ.

ಇದರಿಂದ ಬೆಳೆಗಳನ್ನು ಬೆಳೆಯಲಾಗುತ್ತಿಲ್ಲ. ಬೆಳೆಗಳನ್ನು ಬೆಳೆದು ಬದುಕನ್ನು ಕಟ್ಟಿಕೊಂಡಿದ್ದ ಲಕ್ಷಾಂತರ ಕುಟುಂಬಗಳು ಇದರಿಂದ ಕಂಗಾಲಾಗಿದ್ದಾರೆ. ತಮ್ಮ ಸಂಪಾದನೆಯ ಸಾಕಷ್ಟು ಪ್ರಮಾಣದ ಹಣವನ್ನು ಕೊಳವೆಬಾವಿ ಕೊರೆಸಲು ವೆಚ್ಚ ಮಾಡುವಂತಾಗಿದ್ದು ಸಾಲಕ್ಕೆ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದರು.

ಕೋಲಾರ ಕ್ಷೇತ್ರದ ಸಂಸದ ಮಲ್ಲೇಶ್‌ಬಾಬು ಸಹ ಬಯಲು ಸೀಮೆಯ ಭಾಗದಲ್ಲಿ ಕೃಷಿಕರು ಕೃಷಿ ನೀರಿಗಾಗಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವ ವಿ.ಸೋಮಣ್ಣ ಅವರಿಗೆ ಮನವರಿಕೆ ಮಾಡಿಕೊಟ್ಟು ಕೃಷ್ಣಾ ನದಿ ನೀರನ್ನು ಹರಿಸಲು ಒತ್ತಾಯಿಸಿದರು.

ಮನವಿಯನ್ನು ಸ್ವೀಕರಿಸಿದ ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಅವರು, ನಾನು ಸಹ ಆ ಭಾಗದಿಂದಲೆ ಬಂದವನು. ಅಲ್ಲಿ ಕೃಷಿ ಕ್ಷೇತ್ರ ಮತ್ತು ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳ ಸಂಪೂರ್ಣ ಅರಿವು ನನಗಿದೆ ಎಂದರು.

ಸಮಸ್ಯೆ ಬಗ್ಗೆ ಕೇಂದ್ರದ ಸಚಿವರು ಸೇರಿದಂತೆ ಸಂಬಂಧಿಸಿದ ಎಲ್ಲರ ಜತೆ ಮಾತುಕತೆ ನಡೆಸಿ ಕೃಷ್ಣಾ ನದಿ ನೀರನ್ನು ಹರಿಸುವಂತ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು.

ಕೋಲಾರ ಕ್ಷೇತ್ರದ ಸಂಸದ ಮಲ್ಲೇಶ್‌ಬಾಬು, ಶಿಡ್ಲಘಟ್ಟ ಶಾಸಕ ಮೇಲೂರು ರವಿಕುಮಾರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅಪ್ಪೇಗೌಡನಹಳ್ಳಿ ಕೆ.ಲಕ್ಷ್ಮಿನಾರಾಯಣರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಕ್ ಮುನಿಯಪ್ಪ, ತಾದೂರು ರಘು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version