Handiganala, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ ನಡೆದ ಶ್ರೀತಳಸಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ‘ಸಕ್ಷಮ್’ ಕೇಂದ್ರ ಉದ್ಘಾಟನೆ ಹಾಗೂ ವಾರ್ಷಿಕ ಸಭೆ ಕಾರ್ಯಕ್ರಮದಲ್ಲಿ ಎನ್.ಆರ್.ಎಲ್.ಎಂ ಯೋಜನೆಯ ನಿರ್ದೇಶಕ ಈಶ್ವರಪ್ಪ ಅವರು ಮಾತನಾಡುತ್ತಾ, “ಹಣ ಸಂಪಾದನೆಯಷ್ಟೆ ಮುಖ್ಯವಾಗಿ ಅದನ್ನು ಸರಿಯಾಗಿ ನಿರ್ವಹಿಸುವುದು, ಉಳಿತಾಯ ಮಾಡುವುದು ಕೂಡ ನಿತ್ಯಜೀವನದಲ್ಲಿ ಮಹತ್ವದ್ದಾಗಿದೆ” ಎಂದು ಹಿವಿಹೇಳಿದರು.
ಅವರು ಮುಂದುವರೆದು, “ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಕುಟುಂಬ, ವ್ಯವಹಾರ ಅಥವಾ ಸ್ವಯಂ ಉದ್ಯೋಗ ನಡೆಸಬೇಕಾದರೆ ಹಣಕಾಸಿನ ಜಾಣ್ಮೆ ಬೇಕು. ಖರ್ಚು ಮತ್ತು ಉಳಿತಾಯದ ನಡುವೆ ಸಮತೋಲನ ಇರಬೇಕಾಗಿದೆ. ಅದರಲ್ಲೂ ಬ್ಯಾಂಕ್ಗಳೊಂದಿಗೆ ಲೆಕ್ಕಪತ್ರಗಳನ್ನು ಹೊಂದುವುದು ಹೆಚ್ಚು ಸುರಕ್ಷಿತ ಹಾಗೂ ಪ್ರಾಯೋಜನಕಾರಿಯಾಗಿದೆ” ಎಂದರು.
ಈ ಸಂದರ್ಭದಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಲಭ್ಯವಿರುವ ಸೌಲಭ್ಯಗಳು, ಬ್ಯಾಂಕ್ ಸಂಪರ್ಕ, ಉಳಿತಾಯದ ಮಾರ್ಗಗಳು, ಆರ್ಥಿಕ ಸಾಕ್ಷರತೆ ಕುರಿತು ವಿವರಗಳನ್ನೂ ನೀಡಲಾಯಿತು.
ಒಕ್ಕೂಟದ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಬಿರಾದಾರ್, ಡಿ.ಎಂ. ಮುನಿರಾಜು, ಎಫ್ಎಲ್ ಸಿಆರ್ಪಿ ಅಮರಾವತಿ, ಬಾಲರಾಜ್ (ತಾಲ್ಲೂಕು ಅಭಿಯಾನ ಘಟಕ), ಮಧುಪ್ರಿಯಾ (ಕೆನರಾ ಬ್ಯಾಂಕ್ ತರಬೇತಿ ಕೇಂದ್ರ), ಕೃಷಿ ಹಾಗೂ ಪಶು ಸಖಿಯರು, ಒಕ್ಕೂಟದ ಪದಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.