Chikkaballapur : ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಮಠದಲ್ಲಿ (Adichunchanagiri Mutt) ಗುರುವಾರ ರಾತ್ರಿ ಗುರುಪೂರ್ಣಿಮೆ (Guru Purnima) ಕಾರ್ಯಕ್ರಮ ಜರುಗಿತು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha Swamiji) ಅವರ ದರ್ಶನ ಪಡೆಯಲು ಭಕ್ತರು, ಪ್ರಮುಖರು ಆಗಮಿಸಿದ್ದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಚಿಕ್ಕಬಳ್ಳಾಪುರದಲ್ಲಿ ಸುಮ್ಮನೆ ಕುಳಿತರೆ ಅಧ್ಯಾತ್ಮದ ಭಾವಲೋಕಕ್ಕೆ ಹೋಗುತ್ತದೆ.ಕಬ್ಬಿಣವು ಅಯಸ್ಕಾಂತಕ್ಕೆ ಆಕರ್ಷಿತವಾದಂತೆ ಇಲ್ಲಿ ಅಧ್ಯಾತ್ಮದ ಆಳವಾಗಿ ಮೂಡುತ್ತದೆ’ ಎಂದು ಅಭಿಪ್ರಾಯಪಟ್ಟರು.
ಸಂತರು ಮತ್ತು ಗುರುಗಳಿಂದ ದೊರೆಯುವ ಜ್ಞಾನ ಮತ್ತು ಬೋಧನೆಗಳನ್ನು ಮಾರುಕಟ್ಟೆಯಲ್ಲಿ ಪಡೆಯಲು ಸಾಧ್ಯವಿಲ್ಲ. ಜ್ಞಾನ ಪಡೆಯಲು ಇಂತಹ ಸ್ಥಳಗಳಿಗೆ ಭೇಟಿ ನೀಡಿ ಕುಳಿತುಕೊಳ್ಳುವಂತೆ ಮನವಿ ಮಾಡಿದರು. ಮಠಗಳು ಮತ್ತು ಸಂತರ ಮಹತ್ವವನ್ನು ತಿಳಿಸಿ, ಇದು ನಮ್ಮ ದೇಶದ ಅನನ್ಯ ಶಕ್ತಿಯಾಗಿದೆ. ಭಾರತದಲ್ಲಿ, ಸಾಮಾಜಿಕ ಸ್ಥಾನಮಾನವನ್ನು ಲೆಕ್ಕಿಸದೆ, ವ್ಯಕ್ತಿಗಳು ಆಧ್ಯಾತ್ಮಿಕ ಹಸಿವನ್ನು ಅನುಭವಿಸಿದಾಗ, ಅವರು ಲೌಕಿಕ ಆಸ್ತಿಯನ್ನು ಸ್ವಇಚ್ಛೆಯಿಂದ ತ್ಯಜಿಸುತ್ತಾರೆ ಎಂದು ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಎಚ್.ಪುಟ್ಟಸ್ವಾಮಿಗೌಡ, ಕೆ.ವೈ.ನಂಜೇಗೌಡ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಚಿಕ್ಕಬಳ್ಳಾಪುರ ಒಕ್ಕಲಿಗರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಮುಖಂಡರಾದ ಕೆ.ಪಿ.ಶ್ರೀನಿವಾಸಮೂರ್ತಿ, ಕೆ.ವಿ.ನಾಗರಾಜ್, ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.