Chintamani : ಚಿಂತಾಮಣಿ ತಾಲ್ಲೂಕಿನ ಕಾಗತಿ ಗ್ರಾಮದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ 2023-24ನೇ ಸಾಲಿನ ಆತ್ಮ ಯೋಜನೆ ಹಾಗೂ ರಾಷ್ಟ್ರೀಯ ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆಯಡಿ ಗುರುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳದ (International Millets and Organic Fair) ಅಂಗವಾಗಿ ಜಿಲ್ಲಾಮಟ್ಟದ ಸಿರಿಧಾನ್ಯ ಪಾಕ ಸ್ಪರ್ಧೆ ನಡೆಸಲಾಯಿತು.
ವಿಶ್ವದಾದ್ಯಂತ ಸಾವಿರಕ್ಕೂ ಹೆಚ್ಚು ವಿಧವಾದ ಧಾನ್ಯ ಬೆಳೆಯಲಾಗುತ್ತಿದ್ದು ಸಿರಿಧಾನ್ಯ ಕೃಷಿ ರೈತರಿಗೆ ವರದಾನವಾಗಿದೆ. ಹಿಂದಿನ ಕಾಲದಲ್ಲಿ ಒಂದೇ ಪ್ರದೇಶದಲ್ಲಿ ಹತ್ತು ಬೆಳೆಗಳನ್ನು ಬೆಳೆಯುತ್ತಿದ್ದರು. ಈಗಲೂ ವಿಶಿಷ್ಟ ಗುಣಗಳಿಂದ ಕೂಡಿದ ಭೂಮಿಯಲ್ಲಿ ಸಿರಿಧಾನ್ಯ ಬೆಳೆಯಬಹುದು . ಸಿರಿಧಾನ್ಯ ಬೆಳೆಯುವ ದೇಶಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಮಳೆ ಕಡಿಮೆಯಾಗಲಿ, ಬಿಸಿಲು ಹೆಚ್ಚಾಗಲಿ ಎಲ್ಲ ಹವಾಮಾನದಲ್ಲೂ ಸಿರಿಧಾನ್ಯ ಬೆಳೆಯಬಹುದು. ವಿಶಿಷ್ಟ ಗುಣಗಳಿರುವ ಹಾಗೂ ರೈತರಿಗೆ ವರದಾನವಾಗಿರುವ ಸಿರಿಧಾನ್ಯಗಳನ್ನು ರೈತರು ಮತ್ತು ರೈತ ಮಹಿಳೆಯರು ಬೆಳೆಯಲು ಮುಂದಾಗಬೇಕು, ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಜಾವೀದಾ ನಸೀಮಾ ಖಾನಂ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಕೃಷಿ ಇಲಾಖೆ ಉಪನಿರ್ದೇಶಕಿ ಮಂಜುಳಾ, ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ಪ್ರಾಧ್ಯಾಪಕ ಸ್ನೇಹಲ್ ಗಿರಿಲಾಲ್, ಕುರುಬೂರಿನ ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಅಧಿಕಾರಿ ಆರ್.ಅರುಣಾಜಿ ಮಾತನಾಡಿದರು. ಸಹಾಯಕ ಕೃಷಿ ನಿರ್ದೇಶಕಿ ಪಿ.ಮಂಜುರಾಣಿ, ಕಾಗತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಚೇತನಾ, ಕೆ.ವಿ.ಕೆ ಮುಖ್ಯಸ್ಥ ಪಾಪಿರೆಡ್ಡಿ, ವಿಜ್ಞಾನಿ ವಿಶ್ವನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.