Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಮತ ಎಣಿಕೆ (Lokasabha Election Counting) ಸಂಬಂಧ ಅಭ್ಯರ್ಥಿಗಳು ಹಾಗೂ ಅವರ ಪರ ಏಜೆಂಟರ ಸಭೆಯನ್ನು (Agents Meeting) ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ನೇತೃತ್ವದಲ್ಲಿ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ” ಕಳೆದ ಏಪ್ರಿಲ್ 26 ರಂದು ನಡೆದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ಜೂ.4 ರಂದು ನಡೆಯಲಿದ್ದು ಇದಕ್ಕಾಗಿ ಅಗತ್ಯ ಸಿದ್ದತೆ ಕೈಗೊಳ್ಳಲಾಗಿದೆ. ಪ್ರಸ್ತುತ EVM ಗಳನ್ನು ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದ್ದು ಇಲ್ಲಿ 24X7 ಅವಧಿಯಲ್ಲಿಯೂ ಬಿಗಿ ಭದ್ರತೆ ಇದೆ. ಎಲ್ಲಾ ಟೇಬಲ್ಗಳಿಗೆ ಅಭ್ಯರ್ಥಿವಾರು ಒಂದು ಟೇಬಲ್ ಗೆ ಒಂದು ಮತ ಎಣಿಕೆ ಏಜೆಂಟರನ್ನು ನೇಮಕ ಮಾಡಬಹುದಾಗಿದೆ. ಮತ ಎಣಿಕೆ ಏಜೆಂಟರ ನೇಮಕಕ್ಕೆ ಭಾವಚಿತ್ರ ಹಾಗೂ ಅಭ್ಯರ್ಥಿಯನ್ನು ಸಹಿಯೊಂದಿಗೆ ಅರ್ಜಿ ಸಲ್ಲಿಸಬೇಕಿದೆ. ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ಪತ್ರ ಹೊಂದಿರುವವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿರುತ್ತದೆ” ಎಂದು ತಿಳಿಸಿದರು.
ಮತ ಎಣಿಕೆ ಕೇಂದ್ರದಲ್ಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ 8 ವಿಧಾನಸಭಾ ಕ್ಷೇತ್ರಗಳ 2,326 ಮತಗಟ್ಟೆಗಳಲ್ಲಿ ಚಲಾವಣೆಯಾಗಿರುವ ಹಾಗೂ ಅಂಚೆ ಮತದಾನದ ಮೂಲಕ ಚಲಾಯಿಸಲಾದ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಗೌರಿಬಿದನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಕಾರ್ಯವು 10 ಎಣಿಕೆ ಟೇಬಲ್ ಗಳಲ್ಲಿ ಒಟ್ಟು 26 ಸುತ್ತಿನಲ್ಲಿ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಕಾರ್ಯವು 10 ಎಣಿಕೆ ಟೇಬಲ್ ಗಳಲ್ಲಿ ಒಟ್ಟು 27 ಸುತ್ತಿನಲ್ಲಿ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಕಾರ್ಯವು 10 ಎಣಿಕೆ ಟೇಬಲ್ಗಳಲ್ಲಿ ಒಟ್ಟು 26 ಸುತ್ತಿನಲ್ಲಿ, ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಕಾರ್ಯವು 14 ಎಣಿಕೆ ಟೇಬಲ್ ಗಳಲ್ಲಿ ಒಟ್ಟು 30 ಸುತ್ತಿನಲ್ಲಿ, ಹೊಸಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಕಾರ್ಯವು 10 ಎಣಿಕೆ ಟೇಬಲ್ ಗಳಲ್ಲಿ 30 ಸುತ್ತಿನಲ್ಲಿ, ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಕಾರ್ಯವು 10 ಎಣಿಕೆ ಟೇಬಲ್ ಗಳಲ್ಲಿ 30 ಸುತ್ತಿನಲ್ಲಿ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಕಾರ್ಯವು 10 ಟೇಬಲ್ ಗಳಲ್ಲಿ ಒಟ್ಟು 28 ಸುತ್ತಿನಲ್ಲಿ ಹಾಗೂ ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ಕಾರ್ಯವು 10 ಎಣಿಕೆ ಟೇಬಲ್ ಗಳಲ್ಲಿ ನಡೆಯಲಿದೆ. ಒಟ್ಟು 28 ಸುತ್ತಿನಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎನ್. ತಿಪ್ಪೇಸ್ವಾಮಿ, ಚುನಾವಣೆಗೆ ಸ್ಪರ್ಧಿಸಿರುವ ವಿವಿಧ ಅಭ್ಯರ್ಥಿಗಳು ಹಾಗೂ ಅವರ ಪರ ಏಜೆಂಟರು, ಚುನಾವಣಾ ಸಂಬಂಧ ಅಧಿಕಾರಿಗಳು ಪಾಲ್ಗೊಂಡಿದ್ದರು.