Chikkaballapur : ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ತ್ಯಾಗ ಬಲಿದಾನದ ಸಂಕೇತ ಹಾಗೂ ಹಿಂದೂ, ಮುಸ್ಲಿಮರ ನಡುವಿನ ಭಾವೈಕ್ಯ ಸಾರುವ ಮೊಹರಂ (Muharram) ಹಬ್ಬವನ್ನು ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಚಿಕ್ಕಬಳ್ಳಾಪುರ ನಗರದ ಗಂಗಮ್ಮ ಗುಡಿ ಬಳಿಯ ಬಾಬಯ್ಯನ ಗುಡಿಯಲ್ಲಿ ಕಳೆದ 9 ದಿನಗಳಿಂದ ಶ್ರದ್ಧಾಭಕ್ತಿಯಿಂದ ಬಾಬಯ್ಯನನ್ನು ಪ್ರತಿಷ್ಠಾಪಿಸಿ ಹಿಂದೂ, ಮುಸ್ಲಿಮರು ಭಕ್ತಿಭಾವದಿಂದ ವಿಶೇಷ ಪೂಜೆ ಸಲ್ಲಿಸಿ ಮೊಹರಂ ಆಚರಿಸಲಾಯಿತು. ಮೊಹರಂ ಹಬ್ಬವು ಇಸ್ಲಾಂ ಧರ್ಮದ ಹೊಸ ವರ್ಷವಾಗಿದ್ದು ಮೊಹರಂ ಕೊನೆ ದಿನದ ಪ್ರಯುಕ್ತ ನಗರದ ಮುಖ್ಯ ರಸ್ತೆಗಳಲ್ಲಿ ಪಂಜಾಗಳ (ಪೀರು) ಹಸ್ತಗಳನ್ನು ಮೆರವಣಿಗೆ ನಡೆಸಲಾಯಿತು.
ತಾಲ್ಲೂಕಿನ ಮೈಲಪ್ಪನಹಳ್ಳಿ ಗ್ರಾಮದಲ್ಲಿ ಸಹ ಮೊಹರಂ ಹಬ್ಬದ ಆಚರಣೆ ಅದ್ಧೂರಿಯಾಗಿ ನಡೆಯಿತು.
