Chikkaballapur : ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ (National Animal Disease Control Programme) ಜಾನುವಾರುಗಳಿಗೆ (Cattle) ಲಸಿಕಾ ಕಾರ್ಯಕ್ರಮಕ್ಕೆ (Vaccination) ಸಂಬಂಧಿಸಿದ ಕರಪತ್ರಗಳನ್ನು ಚಿಕ್ಕಬಳ್ಳಾಪುರದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ “ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಏ.1 ರಿಂದ 30ರವರೆಗೆ ಹಮ್ಮಿಕೊಂಡಿರುವ 5ನೇ ಸುತ್ತಿನ ಲಸಿಕಾ ಕಾರ್ಯಕ್ರಮದ ಸದಾವಕಾಶವನ್ನು ಜಿಲ್ಲೆಯ ಜಾನುವಾರುಗಳ ಮಾಲೀಕರು ಬಳಸಿಕೊಳ್ಳಬೇಕು. ಜಿಲ್ಲೆಯಲ್ಲಿ ಹಸು, ಎಮ್ಮೆ ಸೇರಿ 1,88,831 ಜಾನುವಾರುಗಳು ಇದ್ದು ಇದರಲ್ಲಿ 1,76,237 (ಶೇ 94) ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ.ಕಾಲು ಬಾಯಿ ಜ್ವರ ರೋಗವನ್ನು ನಿಯಂತ್ರಿಸಲು ಪ್ರತಿ 6 ತಿಂಗಳಿಗೆ ಒಮ್ಮೆ ನಿರಂತರವಾಗಿ ಲಸಿಕೆ ಹಾಕಿಸಬೇಕು. ಲಸಿಕೆಗೆ ಒಳಪಡುವ ಜಾನುವಾರುಗಳಿಗೆ ಅಧಾರ್ ಸಂಖ್ಯೆಯಂತೆ 12 ಸಂಖ್ಯೆಯುಳ್ಳ ಕಿವಿಯೋಲೆ ಅಳವಡಿಸಿ ಭಾರತ್ ಪಶುಧನ್ ತಂತ್ರಾಂಶದಲ್ಲಿ ಪೂರ್ಣ ಮಾಹಿತಿ ದಾಖಲಿಸಲಾಗುತ್ತದೆ. ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಪಶುಪಾಲನಾ ಇಲಾಖೆ ಹಾಗೂ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಸಹಯೋಗದೊಂದಿಗೆ ನಡೆಸಲಾಗುವುದು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ ಸೇರಿದಂತೆ ಅಧಿಕಾರಿಗಳು ಭಾಗಿಯಾಗಿದ್ದರು.