Home News DCC Bank ಬಡ್ಡಿರಹಿತ ಸಾಲ ವಿತರಣೆ ಕಾರ್ಯಕ್ರಮ

DCC Bank ಬಡ್ಡಿರಹಿತ ಸಾಲ ವಿತರಣೆ ಕಾರ್ಯಕ್ರಮ

0
Sidlaghatta DCC Bank Loan Mela Byalahalli Govidnagowda MLA V Muniyappa

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ವೈ ಹುಣಸೇನಹಳ್ಳಿ (Y Hunasenahalli) ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆವರಣದಲ್ಲಿ ಡಿಸಿಸಿ ಬ್ಯಾಂಕ್ (DCC Bank) ಸಹಯೋಗದಲ್ಲಿ ಭಾನುವಾರ 34 ಸ್ತ್ರೀಶಕ್ತಿ ಸಂಘಗಳಿಗೆ 1 ಕೋಟಿ 54 ಲಕ್ಷ ರೂ ಹಾಗೂ 40 ರೈತರಿಗೆ 65 ಲಕ್ಷ ರೂ ಬಡ್ಡಿರಹಿತ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ (Byalahalli Govidagowda) ಮಾತನಾಡಿದರು.

ರೈತರು ಹಾಗೂ ಮಹಿಳೆಯರನ್ನು ಪೀಡಿಸುವ ಬಡ್ಡಿ ಮಾಫಿಯಾ ವಿರುದ್ಧ ಹೋರಾಟ ಮಾಡುವುದು ನಮ್ಮ ಉದ್ದೇಶ. ರೈತರನ್ನು ಹಾಗೂ ತಾಯಂದಿರನ್ನು ಆರ್ಥಿಕವಾಗಿ ಸಭಲರನ್ನಾಗಿಸುವುದೇ ಡಿಸಿಸಿ ಬ್ಯಾಂಕಿನ ಮೂಲ ಗುರಿಯಾಗಿದೆ. ಈ ಹಿಂದೆ ತಾಲ್ಲೂಕಿನ ಬಹಳಷ್ಟು ಸಹಕಾರಿ ಸಂಘಗಳಿಗೆ ಸಾಲ ವಿತರಿಸುವ ಶಕ್ತಿಯಿರಲಿಲ್ಲ. ಆದರೆ ಇದೀಗ ಬಹುತೇಕ ಸಂಘಗಳು ಆರ್ಥಿಕವಾಗಿ ಸಬಲವಾಗಿದ್ದು ಬಡ್ಡಿರಹಿತ ಸಾಲ ನೀಡಲು ಶಕ್ತಿ ಬಂದಿದೆ ಎಂದರೆ ಅದಕ್ಕೆ ಮಹಿಳಾ ಸ್ವಸಹಾಯ ಸಂಘಗಳು ಪ್ರಾಮಾಣಿಕವಾಗಿ ಹಣವನ್ನು ವಾಪಸ್ ಕಟ್ಟುವುದೇ ಮುಖ್ಯ ಕಾರಣವಾಗಿದೆ ಎಂದರು.

 ದೇಶದಲ್ಲೀಗ ಬಡವರ ಬಗ್ಗೆ ನಿರ್ಲಕ್ಷ್ಯ ತೋರುವ ವಾತಾವರಣ ಸೃಷ್ಟಿಯಾಗಿದೆ. ಬಡವರೆಲ್ಲರೂ ಮೋಸಗಾರರಲ್ಲ, ಬಡತನಕ್ಕೆ ಮೋಸ ಗೊತ್ತಿಲ್ಲ. ಭ್ರಷ್ಟಾಚಾರದ ವಿರುದ್ದ ತಾಯಂದಿರು ಮಾತನಾಡುವಂತಾಗಬೇಕು. ಯಾರೂ ತಮ್ಮ ಮತಗಳನ್ನು ಹಣಕ್ಕೆ ಮಾರಿಕೊಳ್ಳಬಾರದು. ಚುನಾವಣೆ ವೇಳೆ 500-1000 ರೂ ನೀಡಿ ಮತ ಪಡೆದು ಗೆದ್ದ ವ್ಯಕ್ತಿ ಮುಂದೆ ನಿಮ್ಮ ಸೇವೆ ಮಾಡುತ್ತಾನೆಯೇ. ಹಣ ಹೂಡಿ ಗೆದ್ದವನು ಹಣ ಮಾಡಲು ಮುಂದಾಗಿ ಭ್ರಷ್ಟಾಚಾರ ಮಾಡಲು ಮುಂದಾಗುತ್ತಾನೆಯೇ ಹೊರತು ಜನಸೇವೆ ಮಾಡುವುದಿಲ್ಲ. ಹಾಗಾಗಿ ಚುನಾವಣೆ ವೇಳೆ ಬಂದು ಹಣ ಹಂಚುವವರನ್ನು ತಿರಸ್ಕರಿಸಿ ಜನಸೇವೆ ಮಾಡುವ ಒಳ್ಳೆಯವರನ್ನು ಆಯ್ಕೆ ಮಾಡಲು ತಾಯಂದಿರು ಮನಸ್ಸು ಮಾಡಬೇಕು ಎಂದರು.

 ಪಡೆದ ಸಾಲ ಮರುಪಾವತಿ ಮಾಡುವಲ್ಲಿ ತಾಲ್ಲೂಕಿನ ತಾಯಂದಿರು ಪ್ರಾಮಾಣಿಕರಾಗಿರುವರು. ತಾಲ್ಲೂಕಿನಾದ್ಯಂತ ಇರುವ ಎಲ್ಲಾ ವರ್ಗಗಳ ಮಹಿಳೆಯರಿಗೂ ಮುಂಬರುವ ದಿನಗಳಲ್ಲಿ ತಲಾ 1 ಲಕ್ಷ ರೂ ಬಡ್ಡಿರಹಿತ ಸಾಲನೀಡುವ ಭರವಸೆ ನೀಡಿದ ಅವರು ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ಪ್ರತಿಯೊಂದು ಕುಟುಂಬವೂ ಚೆನ್ನಾಗಿರುತ್ತದೆ. ಬ್ಯಾಂಕಿನಿಂದ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸಲು ಡಿಸಿಸಿ ಬ್ಯಾಂಕ್ ಸದಾ ಸಿದ್ಧವಾಗಿರುತ್ತದೆ ಎಂದರು.

 ಶಾಸಕ ವಿ.ಮುನಿಯಪ್ಪ (V Muniyappa) ಮಾತನಾಡಿ, ಆರ್ಥಿಕ ಸಂಕಷ್ಟದ ನಡುವೆ ಡಿಸಿಸಿ ಬ್ಯಾಂಕಿನಿಂದ ಮಹಿಳಾ ಸ್ವ ಸಹಾಯ ಸಂಘಗಳಿಗೆ ವಿತರಣೆ ಮಾಡುತ್ತಿರುವ ಬಡ್ಡಿರಹಿತ ಸಾಲ ಸೌಲಭ್ಯಗಳನ್ನು ಮಹಿಳಾ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಬೆಳೆಯುವ ಜೊತೆಗೆ ನಿಗಧಿತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಸಹಕಾರಿ ಕ್ಷೇತ್ರದ ಬಲವರ್ಧನೆಗೆ ಸಹಕರಿಸಬೇಕು ಎಂದರು.

 ವೈ ಹುಣಸೇನಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಬಸವರಾಜ್ ಮಾತನಾಡಿ,ಕೇವಲ ಮೂರೂವರೆ ವರ್ಷದ ಅವಧಿಯಲ್ಲಿ ಆಡಳಿತ ಮಂಡಳಿಯ ಸಹಕಾರದಿಂದ ಈವರೆಗೂ ಮಹಿಳಾ ಸ್ವಸಹಾಯ ಸಂಘಗಳು ಸೇರಿದಂತೆ ರೈತರ ಕೆಸಿಸಿ ಸಾಲವಾಗಿ ಸುಮಾರು 10 ಕೋಟಿಗೂ ಹೆಚ್ಚು ಸಾಲ ವಿತರಿಸಲಾಗಿದೆ. ಬಡ್ಡಿರಹಿತ ಸಾಲವನ್ನು ಮಹಿಳೆಯರು ನಿಗಧಿತ ಉದ್ದೇಶಕ್ಕೆ ಬಳಸಿಕೊಳ್ಳುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಸಾಲ ಪಡೆದ ಮಹಿಳಾ ಸ್ವಸಹಾಯ ಸಂಘಗಳ ಪ್ರತಿಯೊಬ್ಬರು ಸಹಕಾರ ಸಂಘದಲ್ಲಿಯೇ ಖಾತೆ ತೆರೆದು ಇಲ್ಲಿಯೇ ವ್ಯವಹಾರ ನಡೆಸಿದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಜನರಿಗೆ ಉತ್ತಮ ಸೇವೆ ಕಲ್ಪಿಸಲು ಸಾಧ್ಯವಾಗುತ್ತದೆ ಎಂದರು.

 ನಮ್ಮ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಲ್ಲಿ ರೈತರಿಗೆ ಉಚಿತವಾಗಿ ಮಣ್ಣು ಪರೀಕ್ಷೆ ಮಾಡಿಸಿಕೊಡಲಾಗುವುದು. ಬೇರೆ ಬ್ಯಾಂಕುಗಳಿಗಿಂತ ಕಡಿಮೆ ಬಡ್ಡಿಗೆ ಟ್ರಾಕ್ಟರ್, ಹುಳುಮನೆ, ಕೋಳಿ ಶೆಡ್ ಮುಂತಾದವುಗಳಿಗೆ ಸಾಲ ನೀಡುತ್ತೇವೆ. ಬೇಸಾಯ, ಚಕ್ಕೆ, ಬೂಸಾ ಮುಂತಾದವುಗಳನ್ನು ಕಡಿಮೆ ಬೆಲೆಗೆ ಕೊಡುತ್ತೇವೆ. ರಾಜಕೀಯ ರಹಿತವಾಗಿ ನಡೆಸುವ ಸಹಕಾರ ಸಂಘದಿಂದ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ಹೇಳಿದರು.

 ಈ ಸಂದರ್ಭದಲ್ಲಿ ವೈಹುಣಸೇನಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಸುಮಾರು 34 ಮಹಿಳಾ ಸ್ವಸಹಾಯ ಸಂಘಗಳಿಗೆ 1 ಕೋಟಿ 54 ಲಕ್ಷ ಹಾಗು 40 ಮಂದಿ ರೈತರಿಗೆ 65 ಲಕ್ಷ ಕೆಸಿಸಿ ಸಾಲವಾಗಿ ಒಟ್ಟು 2 ಕೋಟಿ 19 ಲಕ್ಷ ರೂಗಳ ಬಡ್ಡಿರಹಿತ ಸಾಲ ವಿತರಣೆ ಮಾಡಲಾಯಿತು.

 ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಎ.ನಾಗರಾಜ್, ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ ದೇವರಾಜ್, ಮುಖಂಡರಾದ ಎನ್.ಆರ್.ನಿರಂಜನ್, ಎಚ್.ಎಂ.ಕ್ಯಾತಪ್ಪ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಎಸ್.ಆನಂದ್, ಮೇಲ್ವಿಚಾರಕ ಕೆ.ವಿ.ಶ್ರೀನಾಥ್, ವೈಹುಣಸೇನಹಳ್ಳಿ ಎಸ್ ಎಫ್ ಸಿ ಎಸ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಎಸ್.ಅಕ್ಕಲಪ್ಪ ಸೇರಿದಂತೆ ಸಂಘದ ಎಲ್ಲಾ ನಿರ್ದೇಶಕರು ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version