Home Sidlaghatta 49 ವರ್ಷಗಳ ನಂತರ ಶಿಡ್ಲಘಟ್ಟಕ್ಕೆ ಡಾ. ವೀರೇಂದ್ರ ಹೆಗ್ಗಡೆ

49 ವರ್ಷಗಳ ನಂತರ ಶಿಡ್ಲಘಟ್ಟಕ್ಕೆ ಡಾ. ವೀರೇಂದ್ರ ಹೆಗ್ಗಡೆ

0

Sidlaghatta : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು (Dharmasthala Shri Dr. D.Veerendra Heggade) ಶಿಡ್ಲಘಟ್ಟ ತಾಲ್ಲೂಕಿಗೆ 49 ವರ್ಷಗಳ ನಂತರ ಆಗಮಿಸುತ್ತಿದ್ದಾರೆ. ಇದೊಂದು ಸುಯೋಗ. ರಾಜಕೀಯ ರಹಿತವಾಗಿ, ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಿ ಅವರನ್ನು ಸ್ವಾಗತಿಸೋಣ ಎಂದು ಶಾಸಕ ವಿ.ಮುನಿಯಪ್ಪ (V Muniyappa) ತಿಳಿಸಿದರು.

ತಾಲ್ಲೂಕಿನ ಬೆಳ್ಳೂಟಿ ಎಸ್.ಎಲ್.ವಿ ಸಭಾಭವನದಲ್ಲಿ ಜುಲೈ 8 ರಂದು ಶಿಡ್ಲಘಟ್ಟ ತಾಲ್ಲೂಕಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಆಗಮಿಸುವ ನಿಟ್ಟಿನಲ್ಲಿ ಆ ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ಚರ್ಚಿಸಲು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

1971 ರಲ್ಲಿ ತಾಲ್ಲೂಕಿನ ಮೇಲೂರಿಗೂ ಡಾ.ವೀರೇಂದ್ರ ಹೆಗಡೆಯವರು ಭೇಟಿ ನೀಡಿದ್ದರು. ಮೇಲೂರಿನಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ವಧುವರರನ್ನು ಆಶೀರ್ವದಿಸಿದ್ದರು. 1973 ರಲ್ಲಿ ನಗರದ ಉಲ್ಲೂರುಪೇಟೆಯ ಶ್ರೀರಾಮಮಂದಿರ ಮತ್ತು ಭಜನೆಮನೆಯಲ್ಲಿ ಆಯೋಜಿಸಿದ್ದ ಸಾಮೂಹಿಕ ಮದುವೆಗೆ ಮುಖ್ಯ ಅತಿಥಿಯಾಗಿ ಡಾ.ವೀರೇಂದ್ರ ಹೆಗಡೆಯವರು ಆಗಮಿಸಿದ್ದರು. ಸುಮಾರು ಐದು ದಶಕದ ನಂತರ ಅವರು ನಮ್ಮ ತಾಲ್ಲೂಕಿಗೆ ಆಗಮಿಸುತ್ತಿದ್ದಾರೆ. ಅವರನ್ನು ಪ್ತೀತ್ಯಾಧರಗಳಿಂದ ಗೌರವಿಸೋಣ ಎಂದರು.

ಮಾಜಿ ಶಾಸಕ ಎಂ.ರಾಜಣ್ಣ ಮಾತನಾಡಿ, ಧರ್ಮಸ್ಥಳದಿಂದ ನಮ್ಮ ತಾಲ್ಲೂಕು ಸಾಕಷ್ಟು ಕಿ.ಮೀ ದೂರವಿದ್ದರೂ ಹಲವು ರೀತಿಯಲ್ಲಿ ನಂಟನ್ನು ಹೊಂದಿದೆ. “ಮಂಜುನಾಥ” ಎಂಬ ಹೆಸರನ್ನು ಹೊಂದಿರುವ ಅನೇಕ ಮಂದಿ ಇಲ್ಲಿದ್ದಾರೆ. ತಾವು ಬೆಳೆದ ಹಣ್ಣು, ತರಕಾರಿ ಮೊದಲದ ಆಹಾರ ಸಾಮಗ್ರಿಗಳನ್ನು ಬೆಳೆ ಬಂದೊಡನೆಯೇ ಧರ್ಮಸ್ಥಳಕ್ಕೆ ಕಳುಹಿಸುವ ರೂಢಿಯನ್ನು ಇಲ್ಲಿನ ರೈತರು ಹೊಂದಿದ್ದಾರೆ. ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆಯ ಶಾಖೆಯು ತಾಲ್ಲೂಕಿನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಜನರ ಆರ್ಥಿಕ, ಸಾಮಾಜಿಕ, ನೈತಿಕ ಬೆಳವಣಿಗೆಗೆ ನೆರವಾಗುತ್ತಿದೆ. ಡಾ.ವೀರೇಂದ್ರ ಹೆಗಡೆಯವರ ಸಾಮಾಜಿಕ ಕಳಕಳಿಯಿಂದ ನಾಡಿನ ಮಹಿಳೆಯರು, ವೃದ್ಧರು, ರೈತರು, ಅಶಕ್ತರು, ಬಡವರು ಸೇರಿದಂತೆ ಅನೇಕರಿಗೆ ಸಹಾಯವಾಗುತ್ತಿದೆ. ಅವರ ಸ್ವಾಗತ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಎಲ್ಲರೂ ಸೇರಿ ನಡೆಸೋಣ ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಶೀನಪ್ಪ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿಡ್ಲಘಟ್ಟ ತಾಲ್ಲೂಕಿಗೆ ಬಂದು 8 ವರ್ಷಗಳಾಗಿದೆ. ಈಗಾಗಲೇ ತಾಲ್ಲೂಕಿನಲ್ಲಿ 4 ಕೆರೆ ಹೂಳೆತ್ತಿ ಗ್ರಾಮಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ದೇವಸ್ಥಾನಗಳ ಜೀರ್ಣೋದ್ದಾರಕ್ಕೆ, ಹಾಲಿನ ಡೈರಿಯ ಕಟ್ಟಡಕ್ಕೆ ಸಹಾಯಧನವನ್ನು ನೀಡಲಾಗಿದೆ. ವೃತ್ತಿಶಿಕ್ಷಣ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮುಂತಾದ ನೂರಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಪೂಜ್ಯರ ಮಾರ್ಗದರ್ಶನದಲ್ಲಿ ತಾಲ್ಲೂಕಿನಲ್ಲಿ ಮಾಡಿರುವುದಾಗಿ ವಿವರಿಸಿದರು.

ಕೋಚಿಮುಲ್ ನಿರ್ದೇಶಕ ಆರ್. ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯ ಬೆಳ್ಳೂಟಿ ಸಂತೋಷ್, ಎ.ಎಂ.ತ್ಯಾಗರಾಜ್, ಬೋದಗೂರು ವೆಂಕಟಸ್ವಾಮಿರೆಡ್ಡಿ, ನಿರಂಜನ್, ದೇವರಾಜ್, ನಾರಾಯಣ ಸ್ವಾಮಿ, ವೆಂಕಟೇಶ್, ನಾಗರಾಜ್, ಗುಡಿಯಪ್ಪ, ಅನಿಲ್ ಕುಮಾರ್, ಕೃಷ್ಣಪ್ಪ, ಶ್ರೀಕಾಂತ್, ರಮೇಶ್, ಜಿಲ್ಲಾ ನಿರ್ದೇಶಕ ಪ್ರಶಾಂತ್, ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಹೇಮಂತ್ ಕುಮಾರ್, ಮುನೇಗೌಡ, ಬೈರಾ ರೆಡ್ಡಿ, ವೆಂಕಟರಾಮು, ಮುನಿರಾಜು ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook
http://www.facebook.com/sidlaghatta

Instagram
http://www.instagram.com/sidlaghatta

Youtube
https://www.youtube.com/c/sidlaghatta

Website
http://www.sidlaghatta.com

Join Telegram
https://t.me/Sidlaghatta

error: Content is protected !!
Exit mobile version