Sidlaghatta : ಈ ವರ್ಷ ಮಳೆಯ ಕೊರತೆಯಿಂದ ಈಗಾಗಲೆ ಕೆರೆ ಕುಂಟೆಗಳಲ್ಲಿ ನೀರು ಖಾಲಿ ಆಗಿದ್ದು ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಲಿದೆ. ಅಧಿಕಾರಿಗಳು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕಾರ್ಯನಿರ್ವಹಿಸಬೇಕೆಂದು ಶಾಸಕ ಬಿ.ಎನ್.ರವಿಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಟಾಸ್ಕ್ಫೋರ್ಸ್ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಶಿಡ್ಲಘಟ್ಟ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ತಲೆ ದೋರಲಿದೆ.
ಹಾಗಾಗಿ ಸಮಸ್ಯೆ ಎದುರಾಗುವತನಕ ಕಾಯದೆ ಈಗಿನಿಂದಲೆ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಆಲೋಚಿಸಿ ಕ್ರಮವಹಿಸಿ ಎಂದರು.
ಶಿಡ್ಲಘಟ್ಟ ನಗರದಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ನೀರನ್ನು ಪಡೆಯಬಹುದು, ಆದರೆ ಗ್ರಾಮೀಣ ಭಾಗದಲ್ಲಿ ರೈತರ ತೋಟಗಳಿಗೆ ನೀರಿಲ್ಲ. ಹಾಗಾಗಿ ಯಾರೂ ರೈತರು ನೀರು ಕೊಡಲು ಸಿದ್ದವಿಲ್ಲ. ಅದನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ತಯಾರಿ ನಡೆಸಿ ಎಂದರು.
ಈ ಹಿಂದೆ ಬರಗಾಲದಲ್ಲಿ ತಾಲ್ಲೂಕಿನಲ್ಲಿ ಎರಡು ಕಡೆ ಗೋಶಾಲೆಗಳನ್ನು ತೆರೆಯಲಾಗುತ್ತಿತ್ತು. ರೈತರಿಗೆ ಬಂದು ಹೋಗಲು ದೂರ ಆಗಲಿದೆ. ಹಾಗಾಗಿ ಪ್ರತಿ ಗ್ರಾಮಪಂಚಾಯಿತಿಯಲ್ಲೂ ಒಣ ಮೇವನ್ನು ಸಂಗ್ರಹಿಸಿಕೊಳ್ಳಲು ಸೂಕ್ತ ಜಾಗ ಹುಡುಕಿ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಗೋಶಾಲೆ ತೆರೆಯಲು ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ ಎಂದು ಸೂಚಿಸಿದರು.
ಟಾಸ್ಕ್ ಫೋರ್ಸ್ ಸಭೆಯಲ್ಲಿ ತಹಶೀಲ್ದಾರ್ ಬಿ.ಎನ್.ಸ್ವಾಮಿ, ಇಒ ಮುನಿರಾಜು, ನಗರಸಭೆ ಪೌರಾಯುಕ್ತ ಮಂಜುನಾಥ್, ಡಾ.ವೆಂಕಟೇಶ್ಮೂರ್ತಿ, ಕೃಷಿ ಸಹಾಯಕ ನಿರ್ದೇಶಕ ಪಿ.ಆರ್.ರವಿ, ತೋಟಗಾರಿಕೆ ಇಲಾಖೆಯ ಮಂಜುಳ, ರೇಷ್ಮೆ ಇಲಾಖೆಯ ಎಂ.ಸಿ.ಚಂದ್ರಪ್ಪ ಇನ್ನಿತರೆ ಅಕಾರಿಗಳು ಹಾಜರಿದ್ದರು.
ರಾಜ್ಯದಲ್ಲಿನ ಎಲ್ಲ ತಾಲ್ಲೂಕುಗಳಲ್ಲೂ ಬರಗಾಲ ಇರುವುದರಿಂದ ಎಲ್ಲೂ ಕೂಡ ಖರೀದಿಸಲು ಒಣ ಹಾಗೂ ಹಸಿ ಮೇವು ಸಿಗುವುದು ಕಷ್ಟ. ಹಾಗಾಗಿ ರೈತರ ಮನವೊಲಿಸಿ ನೀರು ಅನುಕೂಲ ಇರುವ ರೈತರ ತೋಟಗಳಲ್ಲಿ ಹಸಿ ಮೇವು ಬೆಳೆಯುವಂತೆ ಪ್ರೋತ್ಸಾಹಿಸಲು ಅಧಿಕಾರಿಗಳಿಗೆ ಶಾಸಕ ರವಿಕುಮಾರ್ ತಾಕೀತು ಮಾಡಿದರು. ಜತೆಗೆ ಒಣ ಹಸಿ ಮೇವು ಕೊರತೆಯಿದ್ದು ಮೇವಿನ ಬದಲಿಗೆ ಡೇರಿಗಳ ಮೂಲಕ ಪಶು ಆಹಾರ ವಿತರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತ ಮಂಜುನಾಥ್ ಸಭೆಗೆ ವಿವರ ನೀಡಿ, ಶಿಡ್ಲಘಟ್ಟ ನಗರಕ್ಕೆ ಕುಡಿಯುವ ನೀರು ಪೂರೈಸಲು 127 ಕೊಳವೆ ಬಾವಿಗಳಿದ್ದು ಈ ಪೈಕಿ 105 ಅಷ್ಟೆ ಕಾರ್ಯನಿರ್ವಹಿಸುತ್ತಿದ್ದು 22 ಕೊಳವೆ ಬಾವಿಗಳು ಬತ್ತಿ ಹೋಗಿವೆ. 31 ವಾರ್ಡುಗಳ ಪೈಕಿ 15 ವಾರ್ಡುಗಳಿಗೆ 8 ದಿನಕ್ಕೊಮ್ಮೆ, 10 ವಾರ್ಡುಗಳಿಗೆ 12 ದಿನಕ್ಕೊಮ್ಮೆ, 6 ವಾರ್ಡುಗಳಿಗೆ 10 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. 8 ಖಾಸಗಿ ಕೊಳವೆ ಬಾವಿಗಳಿಂದ ಈಗಾಗಲೆ ನೀರನ್ನು ಪೂರೈಸಲಾಗುತ್ತಿದ್ದು 3 ಕೊಳವೆ ಬಾವಿ ಮಾಲೀಕರು ತಾವೇ ಸ್ವತಃ ಮುಂದೆ ಬಂದಿದ್ದಾರೆ. ಇನ್ನುಳಿದ ಖಾಸಗಿ ಕೊಳವೆ ಬಾವಿಗಳ ಸರ್ವೆ ಕಾರ್ಯ ನಡೆಯುತ್ತಿದ್ದು ಅಗತ್ಯ ಬಿದ್ದರೆ ಎಲ್ಲವುಗಳನ್ನು ವಶಕ್ಕೆ ಪಡೆದು ನಾಗರಿಕರಿಗೆ ನೀರು ಪೂರೈಸಲಾಗುವುದು, ಪ್ರತಿ ಕೊಳವೆಬಾವಿ ಮಾಲೀಕರಿಗೆ ಮಾಸಿಕ 18 ಸಾವಿರ ರೂ.ಹಣ ನೀಡಲು ಸರ್ಕಾರ ನಿಗದಿಪಡಿಸಿದೆ ಎಂದು ಸಭೆಯಲ್ಲಿ ವಿವರಿಸಿದರು.
ಶಿಡ್ಲಘಟ್ಟ ತಾಲ್ಲೂಕು ಗ್ರಾಮೀಣ ಭಾಗದ 46 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಗುರ್ತಿಸಿದ್ದು ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಲಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಕಾರಿ ಜಿ.ಮುನಿರಾಜು ಸಭೆಗೆ ವಿವರಿಸಿದರು.
ಪಶುವೈದ್ಯ ಸಹಾಯಕ ನಿರ್ದೇಶಕ ವಿ.ಶ್ರೀನಾಥ್ರೆಡ್ಡಿ ಅವರು ಸಭೆಗೆ ವಿವರ ನೀಡಿ, ತಾಲ್ಲೂಕಿನಲ್ಲಿ 47 ದೊಡ್ಡ ರಾಸುಗಳಿದ್ದು ಈಗ ದಾಸ್ತಾನು ಇರುವ 41 ಸಾವಿರ ಟನ್ನಷ್ಟು ಮೇವು 17 ವಾರಗಳ ಕಾಲ ಸಾಕಾಗಲಿದ್ದು ಮುಂಜಾಗ್ರತೆಯಾಗಿ ಹೆಚ್ಚಿನ ಪ್ರಮಾಣದ ಮೇವು ದಾಸ್ತಾನು ಮಾಡಲು ಅಗತ್ಯ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮೇವಿನ ಜೋಳ ಬೆಳೆಯುವ ರೈತರಿಗೆ ಪ್ರತಿ ಎಕರೆಗೆ 3 ಸಾವಿರ ಪ್ರೋತ್ಸಾಹ ಧನ ನೀಡುವುದಾಗಿಯೂ ರೈತರ ಮನವೊಲಿಕೆ ನಡೆಯುತ್ತಿದೆ ಎಂದು ವಿವರಿಸಿದರು.