Chintamani : ಚಿಂತಾಮಣಿ ತಾಲ್ಲೂಕು ಕಚೇರಿ ಮುಂದೆ ದಲಿತಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಮಂಗಳವಾರ ಚಿಂತಾಮಣಿ ನಗರಕ್ಕೆ ಸಂವಿಧಾನ ಜಾಗೃತಿ ಜಾಥಾ (Constitution Awareness Jatha) ಪ್ರವೇಶದ ಸಂದರ್ಭದಲ್ಲಿ ಸೂಕ್ತ ಸ್ವಾಗತ ನೀಡದೆ ಬೇಜವಾಬ್ದಾರಿಯಾಗಿ ನಡೆದುಕೊಂಡಿರುವ ಪೌರಾಯುಕ್ತ ಜಿ.ಎನ್.ಚಲಪತಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಭಟನೆ (Protest) ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ವಿಜಯನರಸಿಂಹ “ಕೋಲಾರ ವೃತ್ತದಿಂದ ಚೇಳೂರು ವೃತ್ತ, ವಿನೋಬ ಕಾಲೋನಿ ಮುಖಾಂತರ ಬೆಂಗಳೂರು ವೃತ್ತವನ್ನು ತಲುಪಬೇಕಿದ್ದ್ ಜಾಥಾವನ್ನು ಪೌರಾಯುಕ್ತರು ಬೇರೆ ಮಾರ್ಗದಲ್ಲಿ ಜಾಥಾವನ್ನು ಕರೆದೊಯ್ದ ಉದ್ದೇಶವಾದರೂ ಏನು? ಅವರು ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಜಾಥಾವನ್ನು ಅದ್ದೂರಿಯಾಗಿ ಸ್ವಾಗತಿಸಿ, ಅದ್ಭುತವಾದ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ನಗರದಲ್ಲಿ ಸೂಕ್ತ ವೇದಿಕೆಯಾಗಲಿ, ಯಾವುದೇ ರಾಷ್ಟ್ರನಾಯಕರ ಭಾವಚಿತ್ರವೂ ಇಲ್ಲ. ಸಂವಿಧಾನ ಜಾಗೃತಿ ಜಾಥಾದಲ್ಲಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಭಾವಚಿತ್ರವೂ ಇರಲಿಲ್ಲ. ಸಂವಿಧಾನ ಜಾಥಾಗೆ ಅವಮಾನ ಮಾಡುವ ಉದ್ದೇಶದಿಂದಲೇ ಈ ರೀತಿ ವರ್ತನೆ ಮಾಡಿದ್ದಾರೆ” ಎಂದು ತಿಳಿಸಿದರು.
ತಹಶೀಲ್ದಾರ್ ಸುದರ್ಶನ ಯಾದವ್ ಮನವಿ ಸ್ವೀಕರಿಸಿದರು. ಮುಖಂಡ ಜಿ.ನಾರಾಯಣಸ್ವಾಮಿ, ಆನಂದ್, ಕವಾಲಿ ವೆಂಕಟರಮಣಪ್ಪ, ರಾಧಾಕೃಷ್ಣ, ಜನಾ ನಾಗಪ್ಪ, ಜನಾರ್ದನ್ ಭಾಗವಹಿಸಿದ್ದರು.