Chintamani : ಮುರುಗಮಲೆ ಗ್ರಾಮದ ಹಜರತ್ ಅಮ್ಮಾಜಾನ್–ಬಾವಾಜಾನ್ ದರ್ಗಾವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಲು (Murugamale Dargah development) ₹65 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದ್ದು, ಅದರಲ್ಲೂ ಮೊದಲ ಹಂತವಾಗಿ ₹32 ಕೋಟಿ ಮಂಜೂರಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ (Dr. M.C. Sudhakar) ತಿಳಿಸಿದ್ದಾರೆ.
ಭಾನುವಾರ ಉರುಸ್ ಅಂಗವಾಗಿ ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಅವರು, “ಮಕ್ಕಾ–ಮದೀನಾ ಮಾದರಿಯಲ್ಲಿ ಆಧುನಿಕ ವಿನ್ಯಾಸದ ನೀಲ ನಕ್ಷೆ ಸಿದ್ಧವಾಗಿದೆ. ಮೊದಲ ಕಂತಿನ ಹಣ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಶೀಘ್ರದಲ್ಲೇ ಕಾಮಗಾರಿಗೆ ಭೂಮಿಪೂಜೆ ನಡೆಯಲಿದೆ” ಎಂದು ಹೇಳಿದರು.
ಸಚಿವರು ಮುಂದುವರಿಸಿ, “ದರ್ಗಾವನ್ನು ಅಭಿವೃದ್ಧಿಪಡಿಸಬೇಕೆಂಬ ಕನಸು ಬಹಳ ವರ್ಷಗಳಿಂದ ನನ್ನಲ್ಲಿತ್ತು. ರಾಜಕೀಯ ಹಿನ್ನಡೆಯಿಂದ ಅದು ತಡವಾಯಿತು. ಆದರೆ ಇದೀಗ ಶಾಸಕನಾಗಿ, ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಪರಿಷತ್ ಸದಸ್ಯ ನಜೀರ್ ಅಹ್ಮದ್ ಅವರ ಸಹಕಾರದಿಂದ ಯೋಜನೆಗೆ ಸರ್ಕಾರದ ಅನುಮೋದನೆ ದೊರೆತಿದೆ” ಎಂದರು.
ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಮಾತನಾಡಿ, “ರಾಜ್ಯದ ಯಾವುದೇ ದರ್ಗಾಗೂ ಇಷ್ಟು ದೊಡ್ಡ ಅನುದಾನ ಮಂಜೂರಾಗಿಲ್ಲ. ಮುಂದೆಯೂ ಆಗುವುದು ಕಷ್ಟ. ಇದು ಸಂಪೂರ್ಣವಾಗಿ ಸಚಿವ ಡಾ. ಸುಧಾಕರ್ ಅವರ ಪ್ರಯತ್ನದಿಂದ ಸಾಧ್ಯವಾಗಿದೆ” ಎಂದು ಹೇಳಿದರು.
ಅನ್ಸರ್ ಖಾನ್, ಮಹ್ಮದ್ ಅನೀಫ್, ಶ್ರೀರಾಮರೆಡ್ಡಿ, ಸುಹೇಲ್ ಅಹ್ಮದ್ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.
