Bagepalli : ಬುಧವಾರ ಬಾಗೇಪಲ್ಲಿ ತಾಲ್ಲೂಕಿನ ಮಿಟ್ಟೇಮರಿ ವಿದ್ಯುತ್ ಪ್ರಸರಣ ಸ್ವೀಕರಣ ಕೇಂದ್ರದಿಂದ ವಿವಿಧ ಗ್ರಾಮಗಳ ರೈತರ ಹೊಲ-ಗದ್ದೆಗಳ ಮೇಲೆ ವಿದ್ಯುತ್ ಸರಬರಾಜು ಮಾಡಲಾಗಿದ್ದು , ಇದರ ಪರಿಹಾರ ಹಣ ವಿತರಣೆ ಮಾಡಿಲ್ಲ ಎಂದು ಆಗ್ರಹಿಸಿ ಪ್ರಾಂತ ರೈತ ಸಂಘದ ಮಿಟ್ಟೇಮರಿ ಸ್ಥಳೀಯ ಸಮಿತಿ ನೇತೃತ್ವದಲ್ಲಿ ರೈತರು ವಿದ್ಯುತ್ ಸ್ವೀಕರಣಾ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಜೂಲಪಾಳ್ಯದ ಕಡೆಗೆ ಮಿಟ್ಟೇಮರಿ ವಿದ್ಯುತ್ ಸಬ್ ಸ್ಟೇಷನ್ನಿಂದ ರೈತರ ಹೊಲಗಳಲ್ಲಿ ವಿದ್ಯುತ್ ಕಂಬಗಳನ್ನು ಹಾಕಲಾಗಿದ್ದು, ಬಹಳ ವರ್ಷಗಳು ಕಳೆದರೂ ಇದುವರಿಗೂ ರೈತರಿಗೆ ಪರಿಹಾರ ಹಣ ಬೆಸ್ಕಾಂ ನವರು ನೀಡಿಲ್ಲ. ರೈತರಿಗೆ ಪರಿಹಾರ ಹಣ ನೀಡುವಂತೆ ಕೋಲಾರದ ಉಪವಿಭಾಗದ ಅಧಿಕಾರಿಗಳಿಗೆ ರೈತರು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನೆವಾಗಿಲ್ಲ. ಬೆಸ್ಕಾಂರವರಿಗೆ ರೈತರು ಎಂದರೆ ತಾತ್ಸಾರ ಮನೋಭಾವನೆ, ರೈತರು ಮೀಟರ್ ಹಣ ಪಾವತಿ ಮಾಡಲಿಲ್ಲ ಎಂದರೆ ಮೀಟರ್ಗಳನ್ನು, ಟ್ರಾನ್ಸ್ ಫಾರ್ಮರ್ಗಳನ್ನು ಕಸಿದುಕೊಂಡು ಹೋಗುತ್ತಾರೆ, ವರ್ಷಾನುಗಟ್ಟಲೇ ರೈತರಿಗೆ ಬರಬೇಕಾದ ಪರಿಹಾರ ಹಣ ಮಾತ್ರ ನೀಡಿಲ್ಲ. ನವೆಂಬರ್ ತಿಂಗಳಿನಲ್ಲಿ ರೈತರು ಪ್ರತಿಭಟನೆ ಮಾಡಿದಾಗ, ನವೆಂಬರ್ 6 ರಂದು ಆಗಮಿಸಿ ಪರಿಹಾರದ ಬಗ್ಗೆ ಮಾತನಾಡುತ್ತೇನೆ ಎಂದು ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಇದುವರಿಗೂ ಅಧಿಕಾರಿಗಳು ಬಂದಿಲ್ಲ ಎಂದು ಪ್ರಾಂತ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಪಿ. ಮಂಜುನಾಥರೆಡ್ಡಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಆರ್. ಶ್ರೀನಿವಾಸಲು, ಬಾಲಕೃಷ್ಣಪ್ಪ, ವೆಂಕಟರೆಡ್ಡಿ, ಗಂಗಾಧರಪ್ಪ, ಮದ್ದಿರೆಡ್ಡಿ, ನರಸಿಂಹಪ್ಪ, ಶ್ರೀನಿವಾಸ,ಪಿ.ಜಿ.ಕೃಷ್ಣಪ್ಪ, ನರಸಿಂಹಯ್ಯ, ಪ್ರಭಾಕರರೆಡ್ಡಿ, ಅಶ್ವಥ್ಥರೆಡ್ಡಿ, ವೆಂಕಟೇಶಪ್ಪ, ಯರ್ರಪ್ಪ, ಅನಸೂಯಮ್ಮ ಪಾಲ್ಗೊಂಡಿದ್ದರು.