Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ಗುರುವಾರ ‘ಸಾಯಿ ಕೃಷ್ಣ’ ಕ್ರೀಡಾಂಗಣ ಉದ್ಘಾಟನೆ ಅಂಗವಾಗಿ ‘one world one family cup’ ‘T20’ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ (Sachin Tendulkar), ಯುವರಾಜ್ ಸಿಂಗ್ (Yuvaraj Singh), ಮುತ್ತಯ್ಯ ಮುರಳೀಧರನ್ (Muttiah Muralitharan) ಸೇರಿದಂತೆ ಅನೇಕ ಮಾಜಿ ಕ್ರಿಕೆಟಿಗರು ಪಂದ್ಯಾವಳಿಗೆ ಮೆರುಗು ನೀಡಿದರು. ಸಚಿನ್ ನೇತೃತ್ವದ ‘One World‘ ತಂಡ (184/6) 4 ವಿಕೆಟ್ಗಳಿಂದ ಯುವರಾಜ್ ನಾಯಕತ್ವದ ‘One Family’ (180/6) ತಂಡದ ವಿರುದ್ಧ ಗೆದ್ದಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ “ಆರೋಗ್ಯ, ಶಿಕ್ಷಣ ಮತ್ತು ಅಪೌಷ್ಟಿಕತೆ ನಿವಾರಣೆಯ ವಿಚಾರವಾಗಿ ಸತ್ಯಸಾಯಿ ಆಶ್ರಮದ ಮತ್ತು ಸದ್ಗುರು ಮಧುಸೂದನ ಸಾಯಿ ಅವರ ಕೆಲಸಗಳು ಮಾದರಿಯಾಗಿವೆ. ನವಿ ಮುಂಬೈನ ಸತ್ಯಸಾಯಿ ಆಸ್ಪತ್ರೆಯಲ್ಲಿ ಯಾವುದೇ ನಗದು ಕೌಂಟರ್ಗಳು ಇಲ್ಲ. ಇಲ್ಲಿಗೆ ದಾಖಲಾಗುವ ರೋಗಿಗಳನ್ನು ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿ ತಮ್ಮ ಕುಟುಂಬದ ಸದಸ್ಯರು ಎನ್ನುವ ರೀತಿಯಲ್ಲಿ ನೋಡಿಕೊಳ್ಳುತ್ತಾರೆ. ರೋಗಿಗಳ ಮುಖದಲ್ಲಿ ಸಂತೋಷ ಎದ್ದು ಕಾಣುತ್ತದೆ” ಎಂದು ಹೇಳಿದರು.
ಸದ್ಗುರು ಮಧುಸೂದನ ಸಾಯಿ, ಮಾಜಿ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್ (Sunil Gavaskar), ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ, ನವದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕ ಪ್ರದೀಪ್ ಈಶ್ವರ್ ಹಾಗೂ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.